ಶಿವಮೊಗ್ಗ: ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆ, ರೈಲ್ವೆಸೇತುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಗರದ 100 ಅಡಿ ರಸ್ತೆಯನ್ನು ರೈಲ್ವೆ ನಿಲ್ದಾಣದ ಸಮೀಪ ಇರುವ ಸರ್ವಜ್ಞ ವೃತ್ತಕ್ಕೆ ಕೂಡಿಸಬೇಕು. ವಿದ್ಯಾನಗರ ಹೊಳೆಹೊನ್ನೂರು ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಅಗತ್ಯ ಇರುವ ಭಾಗಗಳಲ್ಲಿ ರಸ್ತೆ ನಿರ್ಮಿಸಬೇಕು. ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು. ರೈಲು ಮಾರ್ಗ ಹಾದು ಹೋಗಿರುವ ನಗರದ ಕೆಲವು ಭಾಗಗಳಲ್ಲಿ ಮೇಲು ಅಥವಾ ಕೇಳ ಸೇತುವೆ ನಿರ್ಮಿಸಬೇಕು. ಈ ಸಂಬಂಧ ರೈಲ್ವೆ ವಿಭಾಗ ಅಧಿಕಾರಿಗಳ ಜತೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.