ಬಿಷ್ಕೆಕ್, ಕಿರ್ಗಿಸ್ತಾನ: ಹಾಲಿ ಚಾಂಪಿಯನ್ ಬಜರಂಗ್ ಪೂನಿಯಾ ಹಾಗೂ ವಿನೋದ್ ಕುಮಾರ್ ಓಂಪ್ರಕಾಶ್ ಅವರು ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಶನಿವಾರ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಪುರುಷರ 65ಕೆ.ಜಿ ವಿಭಾಗದಲ್ಲಿ ಜಬರಂಗ್ ಹಾಗೂ 70ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೋದ್ ಕಂಚಿಗೆ ಕೊರಳೊಡ್ಡಿದರು. ಭಾರತ ಒಟ್ಟು ಎಂಟು ಪದಕಗಳನ್ನು ಗೆದ್ದುಕೊಂಡಿದೆ. ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಆರು ಕಂಚಿನ ಪದಕಗಳನ್ನು ಭಾರತದ ಕುಸ್ತಿಪಟುಗಳು ಜಯಿಸಿದ್ದಾರೆ.
2017ರಲ್ಲಿ ನವದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಬಜರಂಗ್ ಚಿನ್ನ ಗೆದ್ದಿದ್ದರು. ಇಲ್ಲಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅವರು 5–7ರಲ್ಲಿ ಜಪಾನ್ನ ದಿಯಾಚಿ ಟಕತನಿ ವಿರುದ್ಧ ಸೋತರು. ಆದರೆ ದಿಯಾಚಿ ಫೈನಲ್ ತಲುಪಿದ ಕಾರಣ ಪ್ಲೇ ಆಫ್ ಪಂದ್ಯ ಆಡುವ ಅವಕಾಶ ಹರಿಯಾಣದ ಸ್ಪರ್ಧಿಗೆ ಸಿಕ್ಕಿತು.
10–4ರಲ್ಲಿ ಇರಾನ್ನ ಯೋನೆಸ್ ಅಲಿಯಾಕ್ಬರ್ ಎದುರು ಜಯಗಳಿಸಿದ ಬಜರಂಗ್ ಕಂಚಿನ ಪದಕ ಕೊರಳಿಗೇರಿಸಿಕೊಂಡರು. ವಿನೋದ್ ಕುಮಾರ್ ಕ್ವಾರ್ಟರ್ಫೈನಲ್ನಲ್ಲಿ 3–6ರಲ್ಲಿ ಉಜ್ಬೇಕಿಸ್ತಾನದ ಇಕಿತಿಯೊರ್ ಎದುರು ಗೆದ್ದಿದ್ದರು. ಬಳಿಕ ಆಡಿದ ಪ್ಲೇ ಆಫ್ನಲ್ಲಿ ಕಿರ್ಗಿಸ್ತಾನದ ಎಲಮನ್ ಉಲು ಎದುರು ಗೆದ್ದರು.