ನಗರಸಭೆಯ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. 31 ವಾರ್ಡುಗಳಲ್ಲಿನ ಅಷ್ಟೂ ಕಸವನ್ನು 18 ಹಾಗೂ 19ನೇ ವಾರ್ಡ್ ವ್ಯಾಪ್ತಿಯಲ್ಲಿ ಸುರಿಯಲಾಗುತ್ತಿದೆ. ಇದರಿಂದ ಇಲ್ಲಿನ ಅಂತರ್ಜಲವು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಈ ವಾರ್ಡುಗಳ ಪ್ರದೇಶದ ಜನರಿಗೆ ಗಂಟಲು ನೋವು, ಮೈ–ಕೈ ಕೆರೆತ, ಅಲರ್ಜಿ, ಜ್ವರ ಹಾಗೂ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿ ಕಸ ಹಾಕದಂತೆ ಜನರು ಹೋರಾಟ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕಿ ಅನಿತಾ ಅವರು ಇಲ್ಲಿನ ಕಸದ ಸಮಸ್ಯೆಗೆ ಸ್ಪಂದಿಸಿ ಪರ್ಯಾಯ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.