ಡೆಲ್ಟಾಪ್ಲಸ್ ಸೋಂಕು ತಡೆಗೆ ಕಣ್ಗಾವಲು

ರಾಯಚೂರು: ಕೋವಿಡ್–19 ರೂಪಾಂತರಿ ಡೆಲ್ಟಾಪ್ಲಸ್ ಸೋಂಕು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ವರದಿಯಾಗಿರುವ ಕಾರಣ ರಾಯಚೂರು ಜಿಲ್ಲೆಯಲ್ಲಿಯೂ ಆತಂಕ ಸೃಷ್ಟಿಯಾಗಿದ್ದು, ಸೋಂಕು ತಡೆಗಾಗಿ ಜಿಲ್ಲಾಡಳಿತವು ಗಡಿಭಾಗಗಳಲ್ಲಿ ಕಣ್ಗಾವಲು ಏರ್ಪಡಿಸಲು ಮುಂದಾಗಿದೆ.
ವಿಶೇಷವಾಗಿ ಮಹಾರಾಷ್ಟ್ರದಿಂದ ಬರುವ ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಕಟ್ಟಡ ಚಟುವಟಕೆಗಳು, ಕೈಗಾರಿಕೆ ಚಟುವಟಿಕೆಗಳು, ವಾಣಿಜ್ಯ ಮತ್ತು ಖಾಸಗಿ ವಹಿವಾಟು, ಸರ್ಕಾರಿ ಕಚೇರಿಗಳು, ಕಂಟೋನ್ಮೆಂಟ್ ಹೊರಗಿನ ಪ್ರದೇಶ, ಅಂತರರಾಜ್ಯ ಚಟುವಟಿಕೆಗಳು, ಸಾರ್ವಜನಿಕ ಚಲನವಲನ, ಸರಕು ಸಾಗಣೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಆರೋಗ್ಯ ಸೇವೆಗಳು, ಮದುವೆ ಸಮಾರಂಭಗಳು, ಅಂತ್ಯಕ್ರಿಯೆ ಪ್ರಕ್ರಿಯೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಆವಕಾಶವಿದ್ದು, ವಿವಿಧ ಸೇವೆಗಳನ್ನು ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಬಸ್ಗಳಲ್ಲಿ ಆಸನಗಳ ಸಾಮರ್ಥ್ಯ ಮೀರದಂತೆ ಪ್ರಯಾಣಿಕರು ಇರಬೇಕು. ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಭಾಗಿಯಾಗಬೇಕು. ಶಾಪಿಂಗ್ ಮಾಲ್ಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 9ರವರೆಗೂ ಅವಕಾಶ ಮಾಡಲಾಗಿದೆ. ಹೋಟೆಲ್, ಬಾರ್ ಹಾಗೂ ಕ್ಲಬ್ಗಳಲ್ಲಿ ಶೇ 50 ರಷ್ಟು ಆಸನಗಳ ಭರ್ತಿ ಮಾಡುವುದಕ್ಕೆ ಅನುಮತಿಸಲಾಗಿದೆ.
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರುವ ಪ್ರಯಾಣಿಕರು ಆರ್ಟಿಪಿಸಿಆರ್ ಪರೀಕ್ಷೆ ಪತ್ರ ತೋರಿಸುವುದು ಕಡ್ಡಾಯ. ಅಲ್ಲದೆ, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿರುವ ಪ್ರಮಾಣಪತ್ರ ತೋರಿಸಬೇಕು. ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಆಸ್ಪತ್ರೆ, ಔಷಧಿ ಅಂಗಡಿ, ಆಂಬುಲೆನ್ಸ್ ಸೇವೆಗಳಿಗೆ ಮಾತ್ರ ಅವಕಾಶವಿದ.
ಜಿಲ್ಲೆಯಲ್ಲಿ ಮತ್ತೆ ಆತಂಕ: ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟ ಅನುಭವಿಸಿದ ಜನರು ಈಗಷ್ಟೇ ಸಹಜ ಜೀವನದತ್ತ ಮುಖ ಮಾಡಿದ್ದಾರೆ. ಆದರೆ, ಡೆಲ್ಟಾಪ್ಲಸ್ ಸೋಂಕು ಆವರಿಸುತ್ತಿದೆ ಎನ್ನುವ ಸುದ್ದಿಯಿಂದ ಮತ್ತೆ ಆತಂಕ ಶುರುವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.