ರಾಯಚೂರು: ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿದರೆ ಅಲ್ಲಿನ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದಿಸಿ, ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡುತ್ತಾರೆ ಎಂದು ಪ್ರೌಢಶಾಲೆಯ ಶಿಕ್ಷಕ ಕೋರೆನಲ್ ಹೇಳಿದರು.
ತಾಲ್ಲೂಕಿನ ಯರಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಮಕ್ಕಳ ಸಹಾಯವಾಣಿಯಿಂದ ಶನಿವಾರ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ವೇತನ ಇತರೆ ಸೌಲಭ್ಯಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿ ಸಂಯೋಜಕ ಸುದರ್ಶನ ಪ್ರಾಸ್ತಾವಿಕ ಮಾತನಾಡಿ, ಮಕ್ಕಳಿಗೆ ಯಾವುದೇ ರಕ್ಷಣೆ ಮತ್ತು ಪೋಷಣೆಯ ಅವಶ್ಯಕತೆ ಕಂಡುಬಂದಲ್ಲಿ 1098ಕ್ಕೆ ಕರೆ ಮಾಡಬೇಕು ಎಂದು ಹೇಳಿದರು.
ಶಾಲೆ, ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳು ಸ್ವಯಂ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ತಿಮ್ಮಪ್ಪ ಮಾತನಾಡಿ, ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಿ, ಅವರಿಗೆ ತಿಳುವಳಿಕೆ, ಶಿಕ್ಷಣ ನೀಡುವ ಮೂಲಕ ಸಮುದಾಯದ ಮುಖ್ಯವಾಹಿನಿಗೆ, ಕುಟುಂಬಕ್ಕೆ ಒಪ್ಪಿಸಲಾಗುತ್ತದೆ ಎಂದು ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಮಾತನಾಡಿ, ಮಕ್ಕಳಿಗಾಗಿ ಇರುವ ಬಾಲ ನ್ಯಾಯಕಾಯ್ದೆ 2015, ಪೋಕ್ಸೊಕಾಯ್ದೆ 2012, ಬಾಲ ಕಾರ್ಮಿಕ ಪದ್ದತಿ ಮತ್ತು ಬಾಲ್ಯವಿವಾಹ ನಿಷೇಧ ಕುರಿತು ವಿವರಣೆ ನೀಡಿದರು.
ಶಾಲೆಯ ಸಮಸ್ಯೆಗಳಾದ ಕೊಠಡಿ, ಆಟದ ಮೈದಾನ, ಶೌಚಾಲಯ, ಕ್ರೀಡಾ ಸಾಮಾಗ್ರಿ ಕೊರತೆ ಮತ್ತು ಗ್ರಾಮದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆಮಾಡಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹನುಮಂತಪ್ಪ, ಮುಖ್ಯಗುರು ಚೆನ್ನಮ್ಮ, ಪೊಲೀಸ್ ಇಲಾಖೆ ರಾಜ್ ಮೊಹಮ್ಮದ್, ಲಕ್ಷ್ಮಣ್ ನಾಯಕ ಇದ್ದರು.