ರಾಯಚೂರು: ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಪ್ರಸ್ತುತ ರೈತರು ಅನೇಕ ಸಂಕಷ್ಟಕ್ಕೆ ಸಿಲುಕಿದ್ದು ವಿಜ್ಞಾನಿಗಳು ರೈತರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಗಳನ್ನು ನಡೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅವರು ತಿಳಿಸಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಭಾನುವಾರ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾಯದ 12ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಇಂದಿನ ದಿನಗಳಲ್ಲಿ ರೈತರು ಪರ್ಯಾಯ ಬೆಳೆ ಬೆಳೆಯಲು, ನೀರಿನ ಸದ್ಭಳಕೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉದ್ಯಮಿಯಾಗಿ ಹೊರಹೊಮ್ಮಬೇಕು. ರೈತರ ಆದಾಯವನ್ನು ದ್ವಿಗುಣಗೊಳಿಸಲು ವಿಶ್ವವಿದ್ಯಾಲಯದ ಎಲ್ಲಾ ವಿಜ್ಞಾನಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
ನೆರೆಹಾವಳಿ ರೈತರನ್ನು ಕಂಗೆಡಿಸಿದೆ. ಈ ಸಂದರ್ಭದಲ್ಲೂ ಸಹ ವಿಶ್ವವಿದ್ಯಾಲಯವು ನೆರೆಪೀಡಿತ ಪ್ರದೇಶಗಳ ರೈತರ ಮನೆಬಾಗಿಲಿಗೆ ಹೋಗಿ ಸಾಂತ್ವಾನ ನೀಡುವ ಕೆಲಸ ಮಾಡಿದೆ. ರಾಜ್ಯ ಸರ್ಕಾರದ ಬೆಳೆ ಸಮೀಕ್ಷೆ ಆಪ್ ಜಾಗೃತಿ ಕಾರ್ಯಕ್ರಮದದಲ್ಲಿ ತೊಡಗಿಸಿ 133 ಗ್ರಾಮಗಳಿಗೆ ಭೇಟಿ ನೀಡಿ ಸುಮಾರು 30 ಸಾವಿರಕ್ಕೂ ಅಧಿಕ ರೈತರಿಗೆ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಅರಿವು ಮೂಡಿಸಿ, ಆ್ಯಪ್ ಬಳಕೆಗೆ ಸಹಕಾರ ನೀಡಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಯದ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ ಪಾಟೀಲ ಮಾತನಾಡಿ, ಕಳೆದ ಸಾಲಿನಲ್ಲಿ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ, ವಿಸ್ತರಣೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸಾಧಿಸಿದ ಪ್ರಗತಿಯ ಸಂಕ್ಷಿಪ್ತ ವರದಿ ಹಾಗೂ ಮುಂದಿನ ಕ್ರಿಯಾ ಯೋಜನೆಯನ್ನು ಶಿಕ್ಷಣ ಮಂಡಿಸಿದರು.
ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿ ಗಳಿಗೆ ನೀಡುವ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಫಲವಾಗಿ 68 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.
ವ್ಯವಸ್ಥಾಪಕ ಮಂಡಳಿಯ ಸದಸ್ಯ ತ್ರಿವಿಕ್ರಮ ಜೋಶಿ, ಕೋಟ್ರೆಪ್ಪ ಬಿ. ಕೋರೆರ, ಶ್ರೀಧರ ಕೇಸರಹಟ್ಟಿ ಮಾತನಾಡಿದರು.
ಅತ್ಯುತ್ತಮ ಶಿಕ್ಷಕ ಡಾ.ಗುರುರಾಜ ಸುಂಕದ್, ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಡಾ.ಅರುಣಕುಮಾರ ಹೊಸಮನಿ, ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಡಾ.ಜೆ.ಎಸ್ ಯಡಹಳ್ಳಿ ಸೇರಿದಂತೆ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಮಹಾಂತೇಶ ಗೌಡ ಪಾಟೀಲ, ಸುನೀಲ, ಡಾ.ಬಿ.ಕೆ. ದೇಸಾಯಿ, ಡಾ.ಪ್ರಮೋದಕಟ್ಟಿ,ಡಾ.ಡಿ. ಎಂ ಚಂದರಗಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.