ರಾಯಚೂರು: ಜಿಲ್ಲೆಯಲ್ಲಿ ಸತತ ನಾಲ್ಕನೇ ದಿನವೂ ರಾತ್ರಿ ವಿವಿಧೆಡೆ ಮಳೆ ಸುರಿದಿದ್ದು, ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ಹಾಳಾಗಿವೆ. ಸೆಪ್ಟೆಂಬರ್ 1 ರಿಂದ 27 ರವರೆಗೂ ವಾಡಿಕೆ ಮಳೆಗಿಂತಲೂ ಶೇ 47 ರಷ್ಟು ಅಧಿಕ ಮಳೆ ಸುರಿದಿದೆ.
ರಾಯಚೂರು, ಮಾನ್ವಿ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ. ಸಿರವಾರ ತಾಲ್ಲೂಕಿನ ಮರಕಂದಿನ್ನಿ–ಸುಂಕನೂರು ಸೇತುವೆ ಕೊಚ್ಚಿಹೋಗಿದ್ದು ಸಂಚಾರ ಸ್ಥಗಿತವಾಗಿದೆ. ಶುಕ್ರವಾರ ಬೆಳಿಗ್ಗೆ ಶಾಲೆಗೆ ಹೋಗಬೇಕಿದ್ದ ವಿದ್ಯಾರ್ಥಿಗಳು ಪರದಾಡುವಂತಾಯಿತು.
ರಾಯಚೂರು ನಗರದಲ್ಲೂ ಅಧಿಕ ಪ್ರಮಾಣದ ಮಳೆ ಸುರಿದಿದ್ದರಿಂದ ಸಿಯಾತಲಾಬ್, ಹರಿಜನವಾಡದ ಮನೆಗಳಿಗೆ ನೀರು ನುಗ್ಗಿದೆ. ಆಶಾಪುರ ಮಾರ್ಗದಲ್ಲಿ ಐಎಫ್ಸಿ ಗೋದಾಮು ಎದುರು ರಸ್ತೆಯ ಪಾರ್ಶ್ವಭಾಗ ಕೊಚ್ಚಿಕೊಂಡು ಹೋಗಿದೆ. ಮತ್ತೆ ಮಳೆ ಸುರಿದರೆ ರಸ್ತೆ ಸಂಪೂರ್ಣ ಕಿತ್ತುಹೋಗಿ, ಆಶಾಪುರ ಮಾರ್ಗದ ಸಂಚಾರ ಸ್ಥಗಿತವಾಗಲಿದೆ. ಬಡಾವಣೆ ರಸ್ತೆಗಳು ಕೆಸರುಗದ್ದೆಗಳಾಗಿದ್ದು ಬೈಕ್ ಜಾರಿಕೊಳ್ಳುತ್ತಿವೆ. ತಗ್ಗು ಪ್ರದೇಶಗಳಲ್ಲಿ ಮಳೆನೀರು ಸಂಗ್ರಹವಾಗಿದೆ.
ತಗ್ಗಿದ ಮಳೆ: ನಾಲ್ಕು ದಿನ ಮಳೆ ಪ್ರಮಾಣ ಸ್ವಲ್ಪ ತಗ್ಗಿದ್ದು ರಾಯಚೂರು ತಾಲ್ಲೂಕಿನಲ್ಲಿ 23 ಮಿ.ಮೀ. ಹಾಗೂ ಮಾನ್ವಿ ತಾಲ್ಲೂಕಿನಲ್ಲಿ 9 ಮಿ.ಮೀ. ಮಳೆ ದಾಖಲಾಗಿದೆ. ದೇವದುರ್ಗ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ. ಸಿಂಧನೂರು ತಾಲ್ಲೂಕಿನಲ್ಲಿ 7 ಮಿ.ಮೀ. ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಸರಾಸರಿ 9 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.
ಸೆಪ್ಟೆಂಬರ್ 21 ರಿಂದ 27 ರ ಅವಧಿಯಲ್ಲಿ ವಾಡಿಕೆಯಂತೆ 40 ಮಿ.ಮೀ., ಮಳೆಯಾಗಬೇಕಿತ್ತಾದರೂ ವಾಸ್ತವದಲ್ಲಿ 87 ಮಿ.ಮೀ. ಮಳೆಯಾಗಿದೆ. ಮುಂಗಾರು ಆರಂಭ ಜೂನ್ 1 ರಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 374 ಮಿ.ಮೀ., ಮಳೆ ಬಿದ್ದಿದೆ. ವಾಡಿಕೆ ಪ್ರಕಾರ 430 ಮಿ.ಮೀ. ಮಳೆಯಾಗಬೇಕಿತ್ತು. ಶೇ 13 ರಷ್ಟು ಮಳೆ ಕೊರತೆ ದಾಖಲಾಗಿದೆ.
ಸೆಪ್ಟೆಂಬರ್ 26 ರ ಬೆಳಿಗ್ಗೆ 8.30 ರಿಂದ 27 ರ ಬೆಳಿಗ್ಗೆ 8.30ರ ಅವಧಿಯಲ್ಲಿ ರಾಯಚೂರು ಹೋಬಳಿಯಲ್ಲಿ 29.8 ಮಿ.ಮೀ., ಯರಮರಸ್ 20.8 ಮಿ.ಮೀ., ದೇವಸುಗೂರು 42.4 ಮಿ.ಮೀ., ಚಂದ್ರಬಂಡಾ 40.2 ಮಿ.ಮೀ., ಜಾಗರಕಲ್ 12 ಮಿ.ಮೀ., ಗಾಜರಾಳ 15.8 ಮಿ.ಮೀ., ಕಲ್ಮಲಾ 14 ಮಿ.ಮೀ., ಕಲ್ಲೂರ 13 ಮಿ.ಮೀ., ಕುರ್ಡಿ 17.2 ಮಿ.ಮೀ., ರಾಜಲಬಂಡಾ 17.5 ಮಿ.ಮೀ ಮಳೆಯಾಗಿದೆ.
ಮಾನ್ವಿ 6 ಮಿ.ಮೀ., ಕವಿತಾಳ 5.1 ಮಿ.ಮೀ.,ಮಲ್ಲಟ 8 ಮಿ.ಮೀ., ಕುರಕುಂದಾ 13.4 ಮಿ.ಮೀ.
ದೇವದುರ್ಗ ತಾಲ್ಲೂಕಿನ ಗುಬ್ಬೂರ 5.4 ಮಿ.ಮೀ., ಗಲಗ 3 ಮಿ.ಮೀ. ಸಿಂಧನೂರು 17.4 ಮಿ.ಮೀ., ತುರ್ವಿಹಾಳ 2 ಮಿ.ಮೀ., ಗೋರೆಬಾಳ 9.6 ಮಿ.ಮೀ ಮಳೆಯಾಗಿದೆ. ಲಿಂಗಸುಗೂರು 0.6 ಮಿ.ಮೀ., ಗುರಗುಂಟಾ 3 ಮಿ.ಮೀ., ಮಸ್ಕಿ 4.4 ಮಿ.ಮೀ., ಮಳೆ ಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.