ರಾಯಚೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ತಂಡ ಶುಕ್ರವಾರ ದಿಢೀರ್ ದಾಳಿ ನಡೆಸಿ, ₹24 ಸಾವಿರ ದಾಖಲೆ ರಹಿತ ಹಣವನ್ನು ವಶಪಡಿಸಿಕೊಂಡಿದೆ.
ನಗರದ ಮಂತ್ರಾಲಯ ರಸ್ತೆಯಲ್ಲಿರುವ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾಕಷ್ಟು ಅಕ್ರಮ ನಡೆಯುತ್ತಿದೆ. ಯಾವುದೇ ಕೆಲಸಗಳಿಗೂ ಅಧಿಕ ಹಣ ಕೊಡಬೇಕು ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು.
ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಎಸಿಬಿ ಡಿವೈಎಸ್ಪಿ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ 30 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ ಬಳ್ಳಾರಿ, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಅಧಿಕಾರಿಗಳು ತಂಡದಲ್ಲಿ ಇದ್ದರು.
ದಾಳಿ ವೇಳೆ ಸಾರ್ವಜನಿಕರಿಗೆ ಕಚೇರಿಯೊಳಗೆ ಪ್ರವೇಶ ನಿಬಂಧ ಮಾಡಲಾಗಿತ್ತು. ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಸಂಜೆ 6.30ರವರೆಗೂ ಪರಿಶೀಲನೆ ಮುಂದುವರಿದಿತ್ತು.