ಸಿರವಾರ: 'ಶಾಖಾಪೂರು ಕೆರೆಯ ನೀರಿನ ಪರೀಕ್ಷೆ ನಂತರ ದೋಷ ಕಂಡರೆ ಮಾತ್ರ ಕೆರೆಯಿಂದ ನೀರು ಖಾಲಿ ಮಾಡಿಸಿರಿ' ಎಂದು ತಾಲ್ಲೂಕು ಪಂಚಾಯಿತಿ ಇಒ ಶಿವಪ್ಪ ಜನರಿಗೆ ಸೂಚಿಸಿದರು.
ತಾಲ್ಲೂಕಿನ ಶಾಖಾಪೂರು ಗ್ರಾಮದ ಕುಡಿಯುವ ನೀರಿನ ಕುರಿತು, 'ಕೆರೆಗೆ ಕಲ್ಲೆಸೆದಿದ್ದಕ್ಕೆ ನೀರನ್ನೆ ಖಾಲಿ ಮಾಡಿಸುತ್ತಿರುವ ಗ್ರಾಮಸ್ಥರು' ಎಂಬ ಶಿರ್ಷಿಕೆಯಡಿ ‘ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬುಧವಾರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮಸ್ಥರೊಂದಿಗೆ ಮಾತನಾಡಿದತಾಲ್ಲೂಕು ಪಂಚಾಯಿತಿ ಇಒ ಶಿವಪ್ಪ ಅವರು, ಅನವಶ್ಯಕವಾಗಿ ಅನುಮಾನ ಪಟ್ಟು ಅಮೂಲ್ಯವಾಗಿರುವ ನೀರನ್ನು ಕಳೆದುಕೊಳ್ಳಬೇಡಿ ಎಂದು ಮನವರಿಕೆ ಮಾಡಿದರು.
ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿಯಲ್ಲಿ ಏನಾದರೂ ದೋಷ ಕಂಡು ಬಂದರೆ ಮಾತ್ರ ನೀರನ್ನು ಖಾಲಿ ಮಾಡಿಸೋಣ ಇಲ್ಲವಾದರೆ ಖಾಲಿ ಮಾಡಿಸುವ ಅವಶ್ಯಕತೆ ಇಲ್ಲ ಎಂದರು.
ತಹಶೀಲ್ದಾರ್ ಕೆ.ಶ್ರುತಿ, ಅತ್ತನೂರು ಪಿಡಿಒ ವಿಜಯಕುಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪಯ್ಯ, ಕಂದಾಯ ಅಧಿಕಾರಿ ಶ್ರೀನಾಥ ಮತ್ತು ಗ್ರಾಮಸ್ಥರು ಇದ್ದರು.