ರಾಯಚೂರು: ಯುವಕರು ದುಶ್ಚಟಗಳು ಹಾಗೂ ಸೈಬರ್ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಅಮೂಲ್ಯ ಭವಿಷ್ಯವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದು, ದೇಶದ ಅಸ್ತಿ ಮತ್ತು ಭವಿಷ್ಯವಾಗಿರುವ ಯುವಕರು ದುಶ್ಚಟಗಳಿಂದ ದೂರ ಇರಬೇಕು ಎಂದು ರಾಯಚೂರಿನ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಜ್ಞಾನರಾಜ್ ಬಿ. ಸಲಹೆ ನೀಡಿದರು.
ರಾಯಚೂರಿನ ಸೇವಾ ಸಂಸ್ಥೆಯ ಕುಟುಂಬ ಸಲಹಾ ಕೇಂದ್ರ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಜನಶಿಕ್ಷಣ ಸಂಸ್ಥಾನ, ಪಿಸಿಪಿಬಿ ಪದವಿ ಮಹಾವಿದ್ಯಾಲಯ ಹಾಗೂ ಶ್ರೀ ಎಂ.ಪಿ.ಪ್ರಕಾಶ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಿಂದ ಈಚೆಗೆ ಆಯೋಜಿಸಿದ್ದ ಫಿಟ್ ಇಂಡಿಯಾ ಅಭಿಯಾನ -2019 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.’
ಯೋಗಾಭ್ಯಾಸ, ವ್ಯಾಯಾಮ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡು ಸದೃಢ ಆರೋಗ್ಯವನ್ನು ಹೊಂದುವುದು ಉಜ್ವಲ ಭವಿಷ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಸೇವಾ ಜನಶಿಕ್ಷಣ ಸಂಸ್ಥಾನದ ನಿರ್ದೇಶಕ ಸದಾನಂದ ಎಂ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ನೋಡುವ ದೃಷ್ಟಿಕೋನದಂತೆ ಸುತ್ತಲಿನ ಪರಿಸರ ಗೋಚರಿಸುತ್ತದೆ. ಮೊದಲು ನಾವು ಆರೋಗ್ಯವಾಗಿರುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎಂ.ಜಿ.ಮಾರುತಿ ಮಾತನಾಡಿದರು. ಸಮಾರಂಭದಲ್ಲಿ ಸೇವಾ ಸಂಸ್ಥೆಯ ಕುಟುಂಬ ಸಲಹಾ ಕೇಂದ್ರದ ಆಪ್ತ ಸಮಾಲೋಚಕಿ ಸ್ನೇಹಾ, ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ತಿಮ್ಮಪ್ಪ, ಉಪನ್ಯಾಸಕರಾದ ಭೀಮರಾಯ, ನೀಲಕಂಠ, ಮಲ್ಲನಗೌಡ, ಲಕ್ಷ್ಮೀ, ರಜನಿ, ಶಾಹೀದಾ ಬೇಗಂ ಇದ್ದರು.
ಕುಟುಂಬ ಸಲಹಾ ಕೇಂದ್ರದ ಆಪ್ತ ಸಮಾಲೋಚಕಿ ಸ್ನೇಹಾ ನಿರೂಪಿಸಿದರು. ಪದವಿ ವಿದ್ಯಾರ್ಥಿನಿಯರಾದ ರಂಗಮ್ಮ ಹಾಗೂ ಜಂಬಲಮ್ಮ ಪ್ರಾರ್ಥಿಸಿದರು. ಉಪನ್ಯಾಸಕ ಭೀಮರಾಯ ಸ್ವಾಗತಿಸಿದರು. ಶರಣಬಸವ ವಂದಿಸಿದರು.