ರಾಯಚೂರು: ‘ಮಾನಸಿಕ ಶಿಸ್ತು ಕೊಡುವಂತಹ ಶಿಕ್ಷಣ ವ್ಯವಸ್ಥೆ ಇಲ್ಲದಂತಾಗಿದೆ. ನೈಜತೆ ಎಂಬುದೇ ಮಾಯವಾದಾಗ ಶಿಸ್ತು ಎಲ್ಲಿಂದ ಉದ್ಭವವಾಗುತ್ತದೆ. ಇಂತಹ ದುಸ್ಥಿತಿಗೆ ದೇಶ ತಲುಪಿದೆ’ ಎಂದು ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶಕುಮಾರ ವಿಷಾದ ವ್ಯಕ್ತಪಡಿಸಿದರು.
ನಗರದ ಎಎಂಇ ಡೆಂಟಲ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ನ ಡೆಂಟಲ್ ಕಾಲೇಜಿನ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯರಾಗಿ ಹುಟ್ಟಿದವರೆಲ್ಲ ಮನುಷ್ಯರಾಗಲ್ಲ. ಮನುಷ್ಯನಾಗಿ ಹುಟ್ಟಿದವರು ಪ್ರಾಣಿಗಿಂತ ವಿಭಿನ್ನವಾಗಿ ವಿವೇಚನೆಯಿಂದ ವರ್ತಿಸಿದರೆ ಮನುಷ್ಯರಾಗುತ್ತಾರೆ. ಇಲ್ಲದಿದ್ದರೇ ಮನುಷ್ಯರಾಗಿ ಹುಟ್ಟಿದ್ದರು ಅವರು ಪ್ರಾಣಿಗಳೇ ಆಗಿರುತ್ತಾರೆ ಎಂದರು.
ಮನುಷ್ಯನಿಗೆ ಅನಿಸಿದ್ದನ್ನು, ಹೇಳಬೇಕಾದದ್ದನ್ನ ಹಾಗೂ ಮಾಡಬೇಕಾದದ್ದನ್ನು ಮಾಡುವುದಕ್ಕೆ ಅವಕಾಶವಿದೆ. ಆದರೆ, ಪ್ರಾಣಿಗಳಿಗೆ ಮನಸ್ಸಿದ್ದರೂ ಹೇಳಲು, ಮಾಡಲು ಅವಕಾಶವಿಲ್ಲ. ಹಾಗಾಗಿ ಮನುಷ್ಯ ಅದೃಷ್ಟವಂತನಾಗಿದ್ದು, ಪ್ರಾಣಿಯಂತೆ ವರ್ತಿಸಬಾರದು ಎಂದು ತಿಳಿಸಿದರು.
ಮನಸ್ಸನ್ನು ಕ್ರಮಕ್ಕೆ ಒಳಪಡಿಸಿ ಅರಿವು ಮೂಡಿಸುವುದು ಶಿಕ್ಷಣವಾಗಿದೆ. ಶಿಕ್ಷೆಗೆ ಹಾಗೂ ಶಿಕ್ಷಣಕ್ಕೆ ಶಿಸ್ತು ಹತ್ತಿರವಾದ ವಿಚಾರವಾಗಿದೆ. ಮನಸ್ಸನ್ನು ಕ್ರಮ ಬದ್ಧವಾಗಿ ನಡೆಸಿಕೊಳ್ಳುವುದು ಶಿಸ್ತು ಎಂದು ಹೇಳುತ್ತೇವೆ. ಶಿಸ್ತು ಸಮಾಜದಲ್ಲಿ, ಮನೆಯಲ್ಲಿ ಹಾಗೂ ಊರಲ್ಲಿ ಬರಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ, ಸಂಸದ ಬಿ.ವಿ.ನಾಯಕ, ಶಾಸಕ ಡಾ.ಶಿವರಾಜ ಪಾಟೀಲ, ಮುಖಂಡ ಬಸವರಾಜ ಪಾಟೀಲ ಅನ್ವರಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಗಧಾರ ಬೆಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು.