ಲಿಂಗಸುಗೂರು: ‘ಹೂಗಾರ ಸಮುದಾಯ ಅಭಿವೃದ್ಧಿಗೆ ಯಾವ ಸರ್ಕಾರಗಳು ಸೌಲಭ್ಯ ಕಲ್ಪಿಸಿಲ್ಲ. ಹೂಗಾರ ಬಂಧುಗಳು ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು’ ಎಂದು ಅಖಿಲ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಶಂಕರ ಹೂಗಾರ ಕರೆ ನೀಡಿದರು.
ಭಾನುವಾರ ತಾಲ್ಲೂಕು ಹೂಗಾರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಹೂಗಾರ ಮಾದಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, ‘ಕಾಯಕಜೀವಿಗಳಾಗಿ ಹೂ, ಪತ್ರಿ ಮಾರಾಟದಿಂದ ಬದುಕು ಕಟ್ಟಿಕೊಂಡು ಸಂಕಷ್ಟದಲ್ಲಿರುವ ತಮ್ಮವರ ನೆರವಿಗೆ ಸರ್ಕಾರ ಮುಂದಾಗುತ್ತಿಲ್ಲ. ರಾಜಕೀಯ ಗಣ್ಯರು ಸಮುದಾಯದ ಅಭಿವೃದ್ಧಿಗೆ ಅಧಿವೇಶನಗಳಲ್ಲಿ ಧ್ವನಿ ಎತ್ತಬೇಕು. 2(ಎ) ಮೀಸಲಾತಿ ಸೌಲಭ್ಯ ಪಡೆಯಲು ಜನತೆ ಮುಂದಾಗಬೇಕು’ ಎಂದರು.
ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ, ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ ಮಾತನಾಡಿ, ‘ಹೂಗಾರರು ಸಮುದಾಯದ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು‘ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ದೇವರ ಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಇರಕಲ್ಲ ಬಸವ ಪ್ರಸಾದ ಸ್ವಾಮೀಜಿ ಆಶೀರ್ವಚನ ನೀಡಿದರು. ಹೂಗಾರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಮಲ್ಲಪ್ಪ ಹೂಗಾರ ಅಧ್ಯಕ್ಷತೆ ವಹಿಸಿದ್ದರು.