ರಾಯಚೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕಬಿಸಿಯೂಟ ಕಾರ್ಮಿಕರ ಸಂಘ ಜಿಲ್ಲಾ ಘಟಕವು ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಬುಧವಾರದಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.
ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಯಲ್ಲಿ ದುಡಿಯುತ್ತಿರುವ ಬಿಸಿಯೂಟ ಕಾರ್ಮಿಕರಿಗೆ ಸರ್ಕಾರದಿಂದ ತಿಂಗಳಿಗೆ ₹2,700 ಸಂಬಳ ನೀಡಲಾಗುತ್ತಿದೆ. ಕಡಿಮೆ ವೇತನ ಸಾಕಾಗುವುದಿಲ್ಲ. ಹೀಗಾಗಿ ಹಾಸ್ಟೇಲ್ ಕಾರ್ಮಿಕರ ಮಾದರಿಯಲ್ಲಿ ಬಿಸಿಯೂಟ ಕಾರ್ಮಿಕರಿಗೆ ₹11,790 ಸಂಬಳ ನೀಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ಜವಾಬ್ದಾರಿಯನ್ನು ಖಾಸಗಿಯವರಿಗೆ ಕೊಡುವುದನ್ನು ನಿಲ್ಲಿಸಬೇಕು. ಕಾರ್ಮಿಕರಿಗೆ ಭವಿಷ್ಯ ನಿಧಿ, ಹೆರಿಗೆ ರಜೆ ಇತ್ಯಾದಿ ಸಾಮಾಜಿಕ ಭದ್ರತೆ ನೀಡಬೇಕು. ನಿವೃತ್ತಿ ಹೊಂದಿದ ಬಿಸಿಯೂಟ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳಿಗೆ ಅಮಾನತುಗೊಳಿಸಬೇಕು. ವರ್ಷಪೂರ್ತಿ ಕೆಲಸ ಮತ್ತು ವರ್ಷ ಪೂರ್ತಿ ಸಂಬಳ ಕೊಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಅಮರೇಶ,ಬಿಸಿಯೂಟ ಕಾರ್ಮಿಕರ ಜಿಲ್ಲಾಧ್ಯಕ್ಷೆ ಬಸ್ಸಮ್ಮ, ಗಂಗಮ್ಮ, ದೇವಮ್ಮ, ರಾಮಣ್ಣ ಕೊಟ್ನೇಕಲ್, ಪ್ರೇಮ, ಈರಮ್ಮ, ಹುಚ್ಚಮ್ಮ, ರೇಣುಕಮ್ಮ, ಸಂಗಮ್ಮ, ರೇಣುಕಾ ಕೋಟ್ನೇಕಲ್ ಸೇರಿದಂತೆ ಇನ್ನಿತರ ಬಿಸಿಯೂಟ ಕಾರ್ಮಿಕರು ಇದ್ದರು.