ರಾಯಚೂರು: ಮಾನ್ವಿಯಲ್ಲಿ ತಾಯಿ ಹಾಗೂ ಶಿಶು ಮರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿ ತಾಯಿ ಮತ್ತು ಮಗುವಿನ ರಕ್ಷಣೆ ಹಾಗೂ ಪೋಷಣೆ ಅಭಿಯಾನ ಮಾನ್ವಿ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಏಪ್ರಿಲ್ನಿಂದ ಜುಲೈ ತಿಂಗಳವರೆಗೆ ಮಾನ್ವಿ ತಾಲ್ಲೂಕಿನ 5 ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 6 ತಾಯಿ ಮರಣ ಪ್ರಕರಣ ನಡೆದಿವೆ. ಹುಟ್ಟಿದ 28 ದಿನಗಳ ಒಳಗೆ ಸುಮಾರು 20 ನವಜಾತ ಶಿಶುಗಳ ಮರಣ ಹೊಂದಿವೆ. ಕೋವಿಡ್ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಆಂಬುಲೆನ್ಸ್ ಸೇವೆ ಕೊರತೆಯಿಂದಾಗಿ ಈ ಮರಣ ಸಂಭವಿಸಿವೆ ಎಂದು ಆರೋಪಿಸಿದರು.
ತಾಯಿ ಮಗುವಿಗೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳಿನಿಂದ ಯೋಜನೆಗಳು ಕಾರ್ಯನಿರ್ವಹಿಸುತ್ತಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನನಿ ಸುರಕ್ಷಾ ಯೋಜನೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಸೇರಿದಂತೆ ಇನ್ನಿತರ ಸೌಲಭ್ಯ ಕಳೆದ ಹಲವು ತಿಂಗಳಿನಿಂದ ದೊರೆಯುತ್ತಿಲ್ಲ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದ ಪ್ರಸವ ಪೂರ್ವ ಆರೈಕೆ ಕ್ಲಿನಿಕ್ ನಡೆಸಬೇಕು.
ಗರ್ಭಿಣಿ, ಬಾಣಂತಿಯರ ಆರೋಗ್ಯ ವ್ಯವಸ್ಥೆಗಳಿಗೆ ಕಳುಹಿಸಬೇಕಾದ ಮಹಿಳೆಯರಿಗಾಗಿ ಸೂಕ್ತ ರೆಫರಲ್ ವ್ಯವಸ್ಥೆ ತರಬೇಕು. ತಾಲ್ಲೂಕಿನಲ್ಲಿ ಖಾಲಿಯಿರುವ ವೈದ್ಯರ, ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಾಲಿ ಯಲ್ಲಪ್ಪ, ಯಲ್ಲಮ್ಮ, ವಿಜಯಲಕ್ಷ್ಮೀ, ಈರಮ್ಮ, ಅಂಬಮ್ಮ, ವೀರೇಶ ಇದ್ದರು.