ರಾಯಚೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹12 ಸಾವಿರ ಗೌರವಧನ ಖಾತ್ರಿಪಡಿಸಬೇಕು. ಅಗತ್ಯ ಇರುವಷ್ಟು ಆರೋಗ್ಯ ರಕ್ಷಣಾ ಸಾಮಾಗ್ರಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 7 ತಿಂಗಳಿನಿಂದ ಹೋರಾಟ ಮಾಡಿ ಮನವಿ ಸಲ್ಲಿಸುತ್ತಿದ್ದರೂ ಸಂಘದ ಪದಾಧಿಕಾರಿಗಳ ಜೊತೆ ಸರ್ಕಾರ ಸಭೆ ಕರೆದು ಸಮಸ್ಯೆ ಆಲಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಘೋಷಣೆ ಮಾಡಿದ ಪ್ಯಾಕೇಜ್ ನಂತೆ ಒಟ್ಟು ₹5,000 ಪರಿಹಾರ ನೀಡಬೇಕು ಹಾಗೂ ಮೇಲಿಂದ ಮೇಲೆ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಮಾಡಬೇಕು. ಕೊರೊನಾ ಪಾಸಿಟಿವ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಚಿಕಿತ್ಸೆಯ ಅವಧಿಯಲ್ಲಿನ ಸಂಪೂರ್ಣ ಗೌರವಧನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಈರಮ್ಮ, ಚನ್ನಬಸವ ಜಾನೇಕಲ್, ಪ್ರಭಾವತಿ, ಮಲ್ಲಮ್ಮ, ಲಕ್ಷ್ಮೀ, ಮಮತಾ, ಸಂಧ್ಯಾ, ಇಂದಿರಾ, ವೀಣಾ, ಸುಜಾತ, ಸಾಜಿದಾ ಬೇಗಂ, ಜುಲೇಖಾ, ಲಕ್ಷ್ಮೀ ಮತ್ತಿತರರು ಇದ್ದರು.