ರಾಯಚೂರು: ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಹಾಗೂ ವಿದ್ಯಾರ್ಥಿವೇತನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಚಾಲಕರ ಸಂಘಟನೆ ಅಸಂಘಟಿತವಾಗಿದ್ದು,ಸಂಘಟಿತ ವಲಯಕ್ಕೆ ಸೇರಿಸಬೇಕು. ಸರ್ಕಾರದಿಂದ ಕನಿಷ್ಠ ₹5 ಲಕ್ಷವರೆಗೆ ಉಚಿತ ಅಪಘಾತ ವಿಮಾ ಸೌಲಭ್ಯ ಒದಗಿಸಬೇಕು. ಚಾಲಕರ ಭಾರಿ ವಾಹನ ಚಾಲನಾ ಪರವಾನಗಿ ರಿನೆವಲ್ (ಪರಿಷ್ಕರಣೆ) ಆಯಾ ಜಿಲ್ಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಬೇಕು. ಪ್ರತಿ ಜಿಲ್ಲಾ ತಾಲ್ಲೂಕು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತ್ಯೇಕ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಚಾಲಕರಿಗೆ ಪ್ರತ್ಯೇಕ ವಸತಿ ನಿಗಮ ಸ್ಥಾಪನೆ ಮಾಡಬೇಕು. ವಿಶ್ವ ಚಾಲಕರ ದಿನಾಚರಣೆಗೆ ನಿಗದಿತ ದಿನ ಗುರುತಿಸಬೇಕು. ಚಾಲಕರು ಮತ್ತು ಕುಟುಂಬಕ್ಕೆ ಉಚಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಕೊಡಿಸಬೇಕು. ಪ್ರತ್ಯೇಕ ಚಾಲಕ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ರವೀಂದ್ರನಾಥ, ವೆಂಕಟೇಶ ಮಡಿವಾಳ, ಮಹಮ್ಮದ್ ರಫೆ, ಹೈದರ್ ಪಾಶಾ, ರಮೇಶ, ಮಲ್ಲಪ್ಪ ಇದ್ದರು.