ರಾಯಚೂರು: ಪೊಲೀಸ್ ಇಲಾಖೆಯಿಂದ ನಿಯಮ ನಿಬಂಧನೆಗಳನ್ನು ಹೇರಿ, ದಾಖಲೆಗಳು ನೀಡುವಂತೆ ಒತ್ತಾಯಿಸುವುದನ್ನು ತಪ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರಿಗೆ ಆಜಾದ್ ಆಟೊ ಚಾಲಕರ ಸಂಘದ ಸದಸ್ಯರು ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸಿದ್ದು, ಪೊಲೀಸರು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ತೆರಿಗೆ, ಪರವಾನಿಗೆ ಹಾಗೂ ವಿಮೆ ಪಾವತಿಯ ರಸೀದಿಗಳ ತಪಾಸಣೆ ಮಾಡುತ್ತಿದ್ದಾರೆ. ಇಷ್ಟೇ ಪ್ರಯಾಣಿಕರನ್ನು ಸಾಗಿಸಬೇಕು ಎನ್ನುತ್ತಿದ್ದು, ಇದರಿಂದ ಆಟೊ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದರು.
ಆಟೊ ಚಾಲಕರಲ್ಲಿ ಬಡವರು, ಅನಕ್ಷರಸ್ಥರು ಕೂಡ ಇರುವುದರಿಂದ ಅಗತ್ಯ ದಾಖಲೆಗಳು ಇಲ್ಲದಿರುವುದರಿಂದ ದಾಖಲೆ ನೀಡುವಂತೆ ಪೀಡಿಸಲಾಗುತ್ತಿದೆ. ಆದ್ದರಿಂದ ದಾಖಲೆ ಮಾಡಿಕೊಳ್ಳಲು ನಾಲ್ಕು ತಿಂಗಳು ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ದಾಖಲೆ ನೀಡಲು ಒತ್ತಾಯಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸೈಯದ್ ಬಾಷಾ ಖಾದ್ರಿ, ಪವನ್, ಜಿ ವೆಂಕಟೇಶ್, ಪ್ರವೀಣ್, ವೀರೇಶ್, ಸಲೀಂ, ಅನಿಲ್, ಯಲ್ಲಪ್ಪ, ನಾಗರಾಜ ಇದ್ದರು.