ರಾಯಚೂರು: ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಸೂರ್ಯ ಚಂದ್ರರಿದ್ದಂತೆ, ಒಬ್ಬರು ಕ್ರಾಂತಿಕಾರಿ ಜೀವನ ಮೂಲಕ ಬದಲಾವಣೆ ಮಾಡಿದರೆ, ಇನ್ನೊಬ್ಬರು ರಾಜಕೀಯ ಜೀವನದ ಮೂಲಕ ಮಹತ್ತರ ಬದಲಾವಣೆಗೆ ಶ್ರಮಿಸಿದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೆ.ಎಲ್.ಈರಣ್ಣ ಹೇಳಿದರು.
ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಮಾನ, ಶೋಷಣೆ ಹಾಗೂ ಕಷ್ಟಗಳನ್ನು ಎದುರಿಸಿದ ಅಂಬೇಡ್ಕರ್ ಸಮ ಸಮಾಜ ನಿರ್ಮಾಣಕ್ಕೆ ಹಗಲಿರುಳು ದುಡಿದ ದೇಶದ ಬೆಳಕಾಗಿ ಮೂಡಿ ಬಂದರು. ಮೌಢ್ಯ ಆಚರಣೆ, ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ ಜೀವನ ಸಾಗಿಸಲು ಸಂವಿಧಾನದಲ್ಲಿ ಅವಕಾಶ ನೀಡಿದ್ದಾರೆ. ಅವರ ಜನನ ವಿಶ್ವದ ಎಂಟನೇ ಅದ್ಭುತ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಸಮಾದೇಷ್ಟ ಬಿ.ಜ್ಞಾನರಾಜ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಂಡು ಅಂಬೇಡ್ಕರ್ ಹಾಗೂ ಬಾಬು ಜಗಜೀವರಾಮ್ ಚಿಂತೆನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಎಎಸ್ಐ ಚಂದ್ರಶೇಖರ್, ಸರಸ್ವತಿ, ಎನ್.ಬಸವರಾಜ, ನಿಂಬನಗೌಡ, ಸುಭಾಷಚಂದ್ರ, ಮಲ್ಲಿಕಾರ್ಜುನ, ವೀರಭದ್ರ ಇದ್ದರು. ಕಂಪನಿ ಕಮಾಂಡರ್ ರಾಣೋಜಿ ಸ್ವಾಗತಿಸಿರು, ಸೈಯದ್ ಜಾವೇದ್ ಪಾಷ್ ವಂದಿಸಿದರು. ಶಿವಪ್ಪ ಮಣಿಗಿರಿ ನಿರೂಪಿಸಿದರು.