ರಾಯಚೂರು: ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ಅಂಗವಾಗಿ ಭಾನುವಾರ ನಗರದ ಅರಬ್ ಮೊಹಲ್ಲಾ ಬಡಾವಣೆಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು.
ಹಿರಿಯರು,ಮಕ್ಕಳಾದಿಯಾಗಿ ಎಲ್ಲಾ ಮುಸ್ಲಿಮರು ಹೊಸ, ಶುಭ್ರ ಬಟ್ಟೆ ಧರಿಸಿ ನಮಾಜ್ ಮಾಡಿದರು. ನಮಾಜ್ ನಂತರ ಪರಸ್ಪರ ಅಲಿಂಗನ ಮಾಡಿಕೊಂಡು ಈದ್ ಮುಬಾರಕ್ ಎನ್ನುತ್ತಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮೈದಾನದ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆ ಗಳಲ್ಲಿ ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡರು.
ನಮಾಜ್ ನಂತರ ಜಿಲ್ಲೆ ಹಾಗೂ ದೇಶದ ನಾಗರಿಕರ ಆರೋಗ್ಯ, ಆಯುಷ್ಯ, ಮಳೆಗಾಗಿ ಶಾಂತಿ ಸುವ್ಯವಸ್ಥೆಗಾಗಿ ಪ್ರಾರ್ಥಿಸಲಾಯಿತು. ಅಲ್ಲದೇ ಅಯಾ ಬಡಾವಣೆಯ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಿದರು.
ನಂತರ ಮುಸ್ಲಿಮರು ತಮ್ಮ ಸಂಬಂಧಿಕರ, ಕುಟುಂಬ ಸದಸ್ಯರ ಮನೆಗಳಿಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಆರ್ಥಿಕವಾಗಿ ಸ್ಥಿತಿವಂತ ಮುಸ್ಲಿಮರು ಮೇಕೆಗಳ ಕುರ್ಬಾನಿ (ಬಲಿ)ನೀಡಿ ನೆರೆಹೊರೆಯವರಿಗೆ,ಸಂಬಂಧಿಕರಿಗೆ, ಬಡವರಿಗೆ ಹಂಚಿಕೆ ಮಾಡಿದರು.