ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಯು ತಾಲ್ಲೂಕಿನ ಗಡಿ ಶಕ್ತಿನಗರದ ಬಳಿ ಕೃಷ್ಣಾನದಿ ಸೇತುವೆಯನ್ನು ಭಾನುವಾರ ದಾಟಿದ್ದು, ತೆಲಂಗಾಣ ರಾಜ್ಯ ಪ್ರವೇಶಿಸಿದೆ.
ಯರಮರಸ್ನಲ್ಲಿ ವಾಸ್ತವ್ಯ ಉಳಿದಿದ್ದ ಪಾದಯಾತ್ರಿಗಳು 12 ಕಿಲೋ ಮೀಟರ್ ದೂರದ ಗಡಿಭಾಗದಿಂದ ಐದನೇ ರಾಜ್ಯದತ್ತ ತೆರಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಬಸನಗೌಡ ದದ್ದಲ್ ಸೇರಿದಂತೆ ರಾಜ್ಯದ ಅನೇಕ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಭಾನುವಾರ ಕೂಡಾ ಪಾದಯಾತ್ರೆ ಮಾಡಿದರು.
ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಯರಮರಸ್, ಚಿಕ್ಕಸುಗೂರು, ಹೆಗಸನಹಳ್ಳಿ, ದೇವಸೂಗೂರು, ಕಾಡ್ಲೂರು ಸೇರಿದಂತೆ ವಿವಿಧ ಗ್ರಾಮಗಳ ಜನರು ರಾಹುಲ್ ಗಾಂಧಿ ಅವರನ್ನು ನೋಡುವುದಕ್ಕೆ ಹೆದ್ದಾರಿಯುದ್ದಕ್ಕೂ ನಿಂತುಕೊಂಡಿದ್ದರು.
ಸೇತುವೆ ಬಳಿ ತೆಲಂಗಾಣ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ತೆಲಂಗಾಣದ ಮೆಹಬೂಬನಗರ್ ಜಿಲ್ಲೆಯ ಗುಡೆಬಳ್ಳೂರ ಗ್ರಾಮದ ಬಳಿ ಬೆಳಗಿನ ವಿರಾಮಕ್ಕೆ ವ್ಯವಸ್ಥೆ ಮಾಡಲಾಗಿದೆ.