ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಸಾಧನೆ ಮನೆಮನೆಗೆ ಪ್ರಚಾರ: ಶಾಸಕ ಡಾ. ಶಿವರಾಜ ಪಾಟೀಲ

ಬಿಜೆಪಿ ನಗರ, ಗ್ರಾಮೀಣ ಕಾರ್ಯಕರ್ತರ ಸಮಾವೇಶ
Last Updated 3 ಏಪ್ರಿಲ್ 2019, 13:14 IST
ಅಕ್ಷರ ಗಾತ್ರ

ರಾಯಚೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಾಡಿರುವ ಸಾಧನೆಗಳನ್ನು ಕೇವಲ ಸೋಷಿಯಲ್‌ ಮೆಡಿಯಾಗಳಲ್ಲಿ ಹರಿ ಬಿಡುವುದಕ್ಕೆ ಸಿಮೀತವಾಗಬಾರದು. ಕ್ಷೇತ್ರದಾದ್ಯಂತ ಮನೆಮನೆಗೆ ಹೋಗಿ ಪ್ರಚಾರ ಮಾಡುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕಿದೆ ಎಂದು ಶಾಸಕ ಡಾ. ಶಿವರಾಜ ಪಾಟೀಲ ಹೇಳಿದರು.

ನಗರದ ಗಂಜ್‌ ಕಲ್ಯಾಣ ಮಂಟಪದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಏರ್ಪಡಿಸಿದ್ದ ರಾಯಚೂರು ನಗರ ಹಾಗೂ ಗ್ರಾಮೀಣ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ದೇಶದಲ್ಲಿ 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನಿಂದ ತ್ರಿವಳಿ ತಲಾಕ್‌ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ನರೇಂದ್ರ ಮೋದಿ ಅವರು ಕಾಯ್ದೆ ಜಾರಿಗೊಳಿಸಿದ್ದರಿಂದ ಅಲ್ಪಸಂಖ್ಯಾತರ ಸಮುದಾಯದ ಮಹಿಳೆಯರ ಬದುಕಿಗೆ ಅನುಕೂಲವಾಗಿದೆ ಎಂದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಅವರು ಗೆಲುವು ಸಾಧಿಸಿದರೆ ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರದಿಂದ ₹5 ಸಾವಿರ ಕೋಟಿ ಅನುದಾನ ತರಲಾಗುವುದು. ಜಿಲ್ಲೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿರುವ ಐಐಐಟಿ ಸ್ಥಾಪಿಸುವುದಕ್ಕೆ ಹಾಲಿ ಸಂಸದರು ಸಹಕಾರ ನೀಡಲಿಲ್ಲ ಎಂದು ಆರೋಪಿಸಿದರು.

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ಜಿಲ್ಲೆಗೆ ₹1.2 ಕೋಟಿ ಅನುದಾನದಡಿ ಏಮ್ಸ್‌ ಆಸ್ಪತ್ರೆ ತರಲಾಗುವುದು. ಈ ಭರವಸೆ ಈಡೇರದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದರು.

ಬಿ.ವಿ. ನಾಯಕ ಮಾಜಿ ಸಂಸದರಾಗುವುದು ಖಚಿತ. ಐದು ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿಲ್ಲ ಎನ್ನುವುದು ಜನರ ಅಭಿಪ್ರಾಯ. ಬಿಜೆಪಿ ಅಭ್ಯರ್ಥಿ ಗೆಲುವನ್ನು ಯಾರೂ ತಡೆಯುವುದಕ್ಕೆ ಸಾಧ್ಯವಿಲ್ಲ. ರಾಯಚೂರು ನಗರ ಕ್ಷೇತ್ರದಲ್ಲಿ 10 ಸಾವಿರ ಅಂತರ, ಗ್ರಾಮೀಣ ಕ್ಷೇತ್ರದಲ್ಲಿ 20 ಸಾವಿರ ಅಂತರಗಳ ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ಅದೇ ರೀತಿ ದೇವದುರ್ಗ ಕ್ಷೇತ್ರದಲ್ಲೂ 25 ಸಾವಿರ ಮತಗಳ ಅಂತರ ಬರಲಿದೆ. ಅತಿಹೆಚ್ಚು ಮತಗಳ ಅಂತರವನ್ನು ಲಿಂಗಸುಗೂರು ವಿಧಾನಸಭೆ ಕ್ಷೇತ್ರದಲ್ಲಿ ಅಮರೇಶ್ವರ ನಾಯಕ ಪಡೆಯಲಿದ್ದಾರೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಇದಕ್ಕಾಗಿ ಪರಿಶ್ರಮಿಸಬೇಕು. ಪ್ರಚಾರ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಅಮರೇಶ್ವರ ನಾಯಕ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಎನ್‌. ಶಂಕ್ರಪ್ಪ, ಸಂಚಾಲಕ ಅಶೋಕ ಗಸ್ತಿ, ನಗರ ಘಟಕದ ಅಧ್ಯಕ್ಷ ಯು. ದೊಡ್ಡ ಮಲ್ಲೇಶಪ್ಪ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮುಖಂಡರಾದ ತಿಪ್ಪರಾಜು ಹವಾಲ್ದಾರ್‌, ಎ. ಪಾಪಾರೆಡ್ಡಿ, ತ್ರಿವಿಕ್ರಮ ಜೋಶಿ, ಆರ್‌. ತಿಮ್ಮಯ್ಯ, ಕಡಕೋಳ ಆಂಜಿನೇಯ್ಯ, ಪ್ರಾಣೇಶ ದೇಶಪಾಂಡೆ, ವಿಜಯ ರಾಜೇಶ್ವರಿ, ಶರಣಮ್ಮ ಕಾಮರೆಡ್ಡಿ ಇದ್ದರು.

ಜಿಲ್ಲೆಯ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT