ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಡಿಸ್ಟ್ರಿಬ್ಯೂಟರ್ 85 ರಿಂದ 92 ರವರೆಗಿನ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಹತ್ತು ಹಲವು ಬಾರಿ ಹೋರಾಟ ಮಾಡಿದರೂ ಇವತ್ತಿಗೂ ಮುಖ್ಯ ಕಾಲುವೆಗೆ 6 ಅಡಿ ಇರಬೇಕಾದ ನೀರು 2 ಅಡಿಗಿಂತ ಹೆಚ್ಚು ಹರಿಸಿಲ್ಲ. ಇದೇ ರೀತಿ ನೀರಿನ ಹರಿವು ಮುಂದುವರಿದರೆ ಮಂಗಳವಾರ ಪಕ್ಷಾತೀತವಾಗಿ ರೈತರೊಂದಿಗೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳೆದ ತಿಂಗಳು ನಡೆದ ಹೋರಾಟದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮುಖ್ಯ ಕಾಲುವೆಗಳ ಮೇಲೆ ಸೂಕ್ತ ಪೊಲೀಸ್ ಬಂದ್ ಒದಗಿಸಿ, ನಾಕಾ ಬಂದಿ ಹಾಕಿ, ಹಗಲು ರಾತ್ರಿ ಗಸ್ತು ತಿರುಗಿ ನೀರೊದಗಿಸುವ ಭರವಸೆಯನ್ನು ನೀಡಿದ್ದಕ್ಕಾಗಿ ಧರಣಿ ಹಿಂಪಡೆಯಲಾಯಿತು’ ಎಂದರು.
ಆದರೆ ಇಂದಿನವರೆಗೂ ಸತತವಾಗಿ ಸಮಪ್ರಮಾಣದ ಗೇಜ್ ನೀರು ಕೆಳಭಾಗದ ರೈತರಿಗೆ ಸಿಗುತ್ತಿಲ್ಲ. ನೀರಿನ ಗೇಜ್ ಅನ್ನು ಕಾಪಾಡುವಲ್ಲಿ ನೀರಾವರಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಬಿಜೆಪಿ ಮುಖಂಡ ಗಂಗಾಧರ ನಾಯಕ,‘ಅಧಿಕಾರಿಗಳು ಪ್ರತಿ ಬಾರಿಯೂ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಈಗಾಗಲೇ ರೈತರು ಬೆಳೆದ ಬೆಳೆ ಅರ್ಧಕ್ಕೆ ಬಂದು ನಿಂತಿದೆ’ ಎಂದರು.