ರಾಯಚೂರು: ಸುಳ್ಳು ಭರವಸೆ ನೀಡುವ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಯಾರಿಗೂ ಇಲ್ಲವಾಗಿದೆ. ದಲಿತ, ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷ ಜಗನ್ನಾಥ ಸುಂಕಾರಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ನರೇಂದ್ರ ಮೋದಿ ದಲಿತರ, ಹಿಂದುಳಿದವರ ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿಯ ಏನೂ ಮಾತನಾಡುತ್ತಿಲ್ಲ. ಸಮಾನತೆ ಹಾಗೂ ಜಾತ್ಯತೀತ ತತ್ವದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ 70 ಏನೂ ಮಾಡಿಲ್ಲ ಎಂದು ಮೋದಿ ಆರೋಪಿಸುತ್ತಿರುವುದು ಖಂಡನೀಯ ಎಂದರು.
ಗೌರವಾಧ್ಯಕ್ಷ ಆದೆಪ್ಪ ಕಾಡ್ಲೂರು ಮಾತನಾಡಿ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಿಯಾಗಿದ್ದಾರೆ. ಅವರಿಂದ ಸಮುದಾಯಕ್ಕೆ ವಂಚನೆಯಾಗಿದೆ ಎಂಬ ಎಂಆರ್ಎಚ್ಎಸ್ ಮುಖಂಡರ ಹೇಳಿಕೆ ಸರಿಯಲ್ಲ. ಅವರಿಂದ ದಲಿತ ಸಮಾಜಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ದೂರಿದರು.
ಖರ್ಗೆ ವಿರುದ್ಧ ಸುಳ್ಳು ಹೇಳಿಕೆ ನೀಡಿರುವ ಮುಖಂಡರು ಬಹಿರಂಗ ಕ್ಷಮೆ ಕೋರಬೇಕು. ಸಮುದಾಯ ವಿಭಜನೆ ಮುಂದಾಗದೇ ದಲಿತರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಬಿ.ವಿ.ನಾಯಕಗೆ ಬೆಂಬಲ ನೀಡಬೇಕು ಎಂದರು.
ಮುಖಂಡರಾದ ಹನುಮಂತಪ್ಪ, ಆಂಜನೇಯ, ಲಕ್ಷ್ಮಣ ಹುಲಿಗಾರ, ತಿಕ್ಕಯ್ಯ, ಚಂದ್ರು, ಸತ್ಯನಾರಾಯಣ ಇದ್ದರು.