ರಾಯಚೂರು: ನವೋದಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವ ನಿಮಿತ್ತ ನವೋದಯ ದಂತ ಮಹಾವಿದ್ಯಾಲಯದ ವಕ್ರದಂತ ಪಂಕ್ತಿ ಚಿಕಿತ್ಸಾ ವಿಭಾಗದಿಂದ ಅಕ್ಟೋಬರ್ 22 ರಿಂದ 28 ರವರೆಗೂ ವಕ್ರದಂತ ಪಂಕ್ತಿ ಚಿಕಿತ್ಸಾ ವಾರ ಆಯೋಜಿಸಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಹುಣಸಗಿ ತಿಳಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಎಸ್.ಅರ್. ರೆಡ್ಡಿ ಮಾರ್ಗದರ್ಶನ ಹಾಗೂ ವಕ್ರದಂತ ಪಕ್ತಿ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸೂಗಾರೆಡ್ಡಿ ನೇತೃತ್ವದಲ್ಲಿ 22 ರ ಬೆಳಿಗ್ಗೆ 10 ಗಂಟೆಗೆ ವಕ್ರದಂತ ಪಂಕ್ತಿ ಚಿಕಿತ್ಸಾ ವಾರ ಉದ್ಘಾಟನೆ ಮಾಡಲಾಗುವುದು. ರಾಯಚೂರು ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ವಕ್ರದಂತ ಪಂಕ್ತಿಯ ಚಿಕಿತ್ಸೆಯನ್ನು ಚಿಕ್ಕ ಚಿಕ್ಕ ಲೋಹದ ಬ್ರಾಕೆಟ್ ಮತ್ತು ಉಕ್ಕಿನ ತಂತಿಯಿಂದ ಚಿಕಿತ್ಸೆ ಮಾಡಲಾಗುತ್ತದೆ. ಈ ಚಿಕಿತ್ಸೆಗೆ ಒಳಗಾದವರು ನಗುವಾಗ ದಂತಗಳಿಗೆ ಅಳವಡಿಸಿದ ತಂತಿ ಪ್ರದರ್ಶನವಾಗುವುದರಿಂದ ಕೆಲವರಿಗೆ ಇರುಸು ಮುರುಸಾಗಬಹುದು. ಇದನ್ನು ತಪ್ಪಿಸುವ ಉದ್ದೇಶಕ್ಕಾಗಿ ಹಲ್ಲಿನ ಬಣ್ಣವನ್ನು ಹೋಲುವ ತಂತಿಗಳನ್ನು ಹಾಕಲಾಗುತ್ತದೆ. ಈ ಚಿಕಿತ್ಸೆ ಪಡೆಯುವವರು ತಾಳ್ಮೆ ವಹಿಸುವುದು ತುಂಬಾ ಮುಖ್ಯವಾಗಿದೆ.
ಚಿಕಿತ್ಸಾ ವಾರದ ಅವಧಿಯಲ್ಲಿ ತುಂಬಾ ಕಡಿಮೆ ಶುಲ್ಕ ಇರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.