ರಾಯಚೂರು: ‘ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ನಾಯಕರನ್ನು ಬೆಳೆಸಿಲ್ಲ. ಆದರೆ, ಅಲ್ಪಸಂಖ್ಯಾತರ ಮತ ಮಾತ್ರ ಅವರಿಗೆ ಬೇಕು. ಸದ್ಯ ನಾನು ಕಾಂಗ್ರೆಸ್ನಿಂದ ದೂರವಾಗಿಲ್ಲ. ಜೆಡಿಎಸ್ ಸೇರಿಲ್ಲ. ಅಭಿಪ್ರಾಯ ಸಂಗ್ರಹಿಸಿ ಮಾರ್ಚ್ನಲ್ಲಿ ನಿರ್ಧರಿಸುತ್ತೇನೆ’ ಎಂದು ಮುಖಂಡ ಸಿ.ಎಂ ಇಬ್ರಾಹಿಂ ಹೇಳಿದರು.
ಬೆಂಬಲಿಗರ ಭೇಟಿಗಾಗಿ ಶನಿವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕಾಂಗ್ರೆಸ್ ಪಕ್ಷದಲ್ಲಿ ನ್ಯಾಯ ಸಿಗಲಿಲ್ಲ. ಅಲ್ಪಸಂಖ್ಯಾತರನ್ನು ಸಭಾಧ್ಯಕ್ಷರನ್ನು ಮಾಡಿಲ್ಲ. ಸಭಾಪತಿಯನ್ನು ಮಾಡಿಲ್ಲ. ಈಗ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಎಲ್ಲರ ಅಭಿಪ್ರಾಯ ಕೇಳುತ್ತಿದ್ದೇನೆ’ ಎಂದರು.
‘ನಾನು ಒಂದೇ ಸಮಾಜದೊಂದಿಗೆ ಪಕ್ಷ ಸಂಘಟನೆ ಮಾಡುವುದಿಲ್ಲ. ಎಲ್ಲ ಸಮಾಜಗಳೊಂದಿಗೆ ಪಕ್ಷ ನಡೆಸುವ ಉದ್ದೇಶ ಹೊಂದಿದ್ದೇನೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಯಡಿಯೂರಪ್ಪನ ಅವರದ್ದು ಸಫಲತೆಗಿಂತ ವಿಫಲತೆಯೇ ಹೆಚ್ಚು. ಸಚಿವ ಸಂಪುಟ ಮಾಡುವುದರಲ್ಲೇ ಅವರ ಸಮಯ ಕಳೆಯುತ್ತಿದೆ. ಅಕ್ಟೋಬರ್ನಲ್ಲಿ ಚುನಾವಣೆ ಬಂದರೂ ಆಚ್ಚರಿ ಪಡಬೇಕಿಲ್ಲ’ ಎಂದು ತಿಳಿಸಿದರು.