ಸಿಂಧನೂರು: ‘ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಸಲು ಬಿಜೆಪಿ ನಾಯಕರೇ ಒಳಸಂಚು ನಡೆಸಿದ್ದು, ಜೊತೆಗೆ ಯಾವುದಾದರೊಂದು ಆರೋಪದಲ್ಲಿ ಯಡಿಯೂರಪ್ಪ ಅವರನ್ನು ಸಿಲುಕಿಸಿ, ಪುನಃ ಜೈಲಿಗೆ ಕಳುಹಿಸುವ ಹುನ್ನಾರವನ್ನೂ ಸಹ ನಡೆಸಿದ್ದಾರೆ’ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ದೂರಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಸರ್ಕಾರವು, ಮರಾಠ ಅಭಿವೃದ್ದಿ ಪ್ರಾಧಿಕಾರ ಮಾಡಿರುವುದು ಮತ್ತು ವೀರಶೈವ ಲಿಂಗಾಯತರನ್ನು 2ಎ ಸೇರ್ಪಡೆ ಮಾಡಲು ಹೊರಟಿರುವುದು ಚುನಾವಣೆ ತಂತ್ರವಾಗಿದೆಯೇ ಹೊರತು ಕಾಳಜಿ ಅಲ್ಲ ಎಂದು ಟೀಕಿಸಿದರು.
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು. ನಿರ್ಲಕ್ಷಿಸಿದರೆ, ತೀವ್ರ ಹೋರಾಟ ಮಾಡ ಬೇಕಾಗುತ್ತದೆ ಎಂದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಂದ ಮಾದಿಗ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಮತಕ್ಕಾಗಿ ಮಾತ್ರ ಬಳಸಿಕೊಂಡು ಸಮಾಜವನ್ನು ಹಳ್ಳಕ್ಕೆ ದೂಡಿದ್ದಾರೆ. ಸದಾಶಿವ ಆಯೋಗ ಬಗ್ಗೆ ಮಾತನಾಡಲು ಕಾರಜೋಳಗೆ ನೈತಿಕತೆ ಇಲ್ಲ ಎಂದರು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಸ್ವಾಮಿ ಕೊಡ್ಲಿ, ಹನುಮಂತಪ್ಪ ಮುದ್ದಾಪುರ, ನಾಗರಾಜಕವಿತಾಳ, ವೆಂಕಟೇಶ ರಾಗಲಪರ್ವಿ, ಖಾಜಾ ಹುಸೇನ್ ರೌಡಕುಂದಾ ಇದ್ದರು.