ರಾಯಚೂರು: ಪ್ರಯತ್ನಕ್ಕೆ ಫಲವಿದ್ದು, ಸಾಧಿಸುವ ಛಲದಿಂದ ನಿರಂತರವಾಗಿ ಪ್ರಯತ್ನ ಪಟ್ಟರೆ ಯಾವುದೇ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ರವಿ ಚೆನ್ನಣ್ಣನವರ್ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಸತಿ ನಿಲಯ ವಿದ್ಯಾರ್ಥಿಗಳ ಒಕ್ಕೂಟದಿಂದ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರಿ ಸಾಧಿಸುವವರೆಗೆ ವಿದ್ಯಾರ್ಥಿಗಳು ಹಿಂದಡಿ ಇಡಬಾರದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಹಿಂಜರಿಕೆ ಬಿಟ್ಟು ಆತ್ಮಸ್ಥೈರ್ಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ಸಾಧಿಸಬಹುದು ಎಂದರು.
ಅಧ್ಯಯನ ಮಾಡಲು ವಿದ್ಯಾರ್ಥಿಗಳು ಪುಸ್ತಕಗಳು ಇಲ್ಲ ಅಥವಾ ಬಟ್ಟೆಗಳಿಲ್ಲ ಎಂಬ ನೆಪಗಳನ್ನು ಹೇಳಬಾರದು. ಎಲ್ಲ ನೋವುಗಳನ್ನು ನುಂಗಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳಿಗೂ ಸವಾಲು ಹಾಗೂ ಸಮಸ್ಯೆಗಳು ಇರುತ್ತವೆ. ಸಾಧಕರ ಜೀವನದಿಂದ ಪ್ರೇರಣೆ ಪಡೆದು ಮುನ್ನಡೆಯಬೇಕು. ನಿರಂತರ ಪ್ರಯತ್ನ, ಆತ್ಮಸ್ಥೈರ್ಯ ಹಾಗೂ ಶ್ರಮ ದಾರಿ ದೀಪವಾಗಿದ್ದು, ಇವುಗಳನ್ನು ಪಾಲಿಸಿದರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿ,ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂಬ ಚಿಂತನೆ ನಡೆದಿತ್ತು. ರವಿ ಚೆನ್ನಣ್ಣನವರ್ ಸಂವಾದ ಕಾರ್ಯಕ್ರಮದ ಮೂಲಕ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುತ್ತಿರುವುದು ಸಮಯೋಚಿತವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಐಎಎಸ್ ಪ್ರೊಬೇಷನರಿ ಅಧಿಕಾರಿ ನವಿನ್ ಭಟ್, ಐಪಿಎಸ್ ಅಧಿಕಾರಿ ನಿಖಿಲ, ತಿಮ್ಮಪ್ಪ ಮಲದಕಲ್ ಇದ್ದರು.