ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಡೀ ಮಳೆಯಾಗಿದ್ದು, ಮಸ್ಕಿ ಪಟ್ಟಣದ ಗಾಂಧಿನಗರದ ಜನವಸತಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಿದ್ದಾರೆ.
ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಬೈಕ್, ಕಾರು ನೀರಿನಲ್ಲಿವೆ. ಜನಸಂಚಾರ ಸಾಧ್ಯವಿಲ್ಲದೆ, ಆಹಾರ ತಯಾರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಸ್ಕಿ ತಾಲ್ಲೂಕಿನ ಹಾಲಾಪುರದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಕವಿತಾಳ ಮಾರ್ಗದ ಸಂಚಾರ ಸ್ಥಗಿತವಾಗಿದೆ. ಹಳ್ಳ ದಾಟಲು ಯತ್ನಿಸಿದ್ದ ಇಬ್ಬರು ಯುವಕರ ಅಪಾಯದಿಂದ ಪಾರಾಗಿದ್ದು, ಅವರಲ್ಲಿದ್ದ ಬೈಕ್ ಹಳ್ಳದಲ್ಲಿ ಕೊಚ್ಚಿಹೋಗಿದೆ.
ಮಳೆ ಈಗಲೂ ಮುಂದುವರಿದಿದೆ. ರಾಯಚೂರು ನಗರದಲ್ಲಿ ಕೆರೆಗೆ ಹೊಂದಿಕೊಂಡ ಇಳಿಜಾರು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ.