ರಾಯಚೂರು: ಜಲ್ ಜೀವನ್ ಮಿಷನ್ (ಜೆ.ಜೆ.ಎಂ) ಯೋಜನೆಯಡಿ ಮಾನ್ವಿ ತಾಲ್ಲೂಕಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಶಿವರಾಜ ಜಾನೇಕಲ್ ಒತ್ತಾಯಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ತಾಲ್ಲೂಕುಗಳಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರ ₹2,200 ಕೋಟಿ ಅನುದಾನ ಟೆಂಡರ್ ಪ್ರಕ್ರಿಯ ಮೂಲಕ ಗುತ್ತೇದಾರರಿಗೆ ನೀಡಲಾಗಿತ್ತು.
ಮೊದಲನೇ ಹಂತದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗಿತ್ತು. ಇಲಾಖೆಯ ಅಧಿಕಾರಿಗಳು ಗುತ್ತೇದಾರರ ಜತೆ ಶಾಮೀಲಾಗಿ ಭಾರಿ ಭ್ರಷ್ಟಾಚಾರ ಮಾಡಿದ್ದು ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇದ್ದ ಹಳೆಯ ಕಾಮಗಾರಿಗಳ ಮೇಲೆ ಅಧಿಕಾರಿಗಳು ಮತ್ತು ಗುತ್ತೇದಾರರು ಮುಖ್ಯ ರಸ್ತೆಗಳಲ್ಲಿ ಹೊಸ ಪೈಪ್ ಗಳನ್ನು ಹಾಕಿ ಸಂಪೂರ್ಣವಾಗಿ ಹಣವನ್ನು ಎತ್ತುವಳಿ ಮಾಡಿ ಬೋಗಸ್ ಕಾಮಗಾರಿ ಮಾಡಿದ್ದಾರೆ ಎಂದು ದೂರಿದರು.
ಮುಖಂಡರಾದ ಅನಿಲ್ ಕುಮಾರ, ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.