ರಾಯಚೂರು: ತಾಲ್ಲೂಕಿನ ಗಾಣಧಾಳ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಗಾಣಧಾಳ ಗ್ರಾಮದ ಶಿವರಾಜ ಎಂಬುವವರ ಪತ್ನಿ ಶಶಿಕಲಾ ಅದೇ ಗ್ರಾಮದ ಎಂಬೋಧರ ಎಂಬ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿರುವ ಕಾರಣ ದೂರು ನೀಡಲು ಹೋದ ಶಿವರಾಜ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ದೂರು ಹಿಪಡೆಯುವಂತೆ ಕಳೆದ ಮೇ 25ರಂದು ಶಿವರಾಜ ಪುತ್ರಿಯ ಮೇಲೆ ಎಂಬೋಧರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳಾ ಠಾಣೆಯಲ್ಲಿ ದೂರು ಈ ಬಗ್ಗೆ ದಾಖಲಿಸಲಾಗಿದ್ದು ಆರೋಪಿಯ ಬಂಧನವಾಗಿಲ್ಲ. ಅನ್ಯಾಯಕ್ಕೊಳಗಾದ ಕುಟುಂಬದ ಮೇಲೆ ಬೆದರಿಕೆ, ದೌರ್ಜನ್ಯ ಮಾಡಲಾಗುತ್ತಿದೆ. ಆರೋಪಿಯ ವಿರುದ್ಧ ಇಡಪನೂರು ಪೊಲಿಸ್ ಠಾಣೆಯಲ್ಲಿ ಕೊಲೆ ಬೆದರಿಕೆಯ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧ ಇಡಪನೂರು ಪಿಎಸ್ಐ ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಬಸವರಾಜ ನಾಡಂಗಿ, ರಾಜು ಬೊಮ್ಮನಾಳ, ಬಿ.ಎನ್. ನರಸಿಂಗಪ್ಪ, ರಾಜಪ್ಪ ಸಿಂಗ್ರಿ, ಮುಕೇಶ ತಿಮ್ಮಾಪುರು, ಬಸವರಾಜ ಅತ್ತನೂರು, ಹಾಗೂ ಸಂತ್ರಸ್ತ ಕುಟುಂಬದವರು ಇದ್ದರು.