ರಾಯಚೂರು: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರತಿಭೆಯನ್ನು ಹೊರಹೊಮ್ಮಿಸುವ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ ಹೇಳಿದರು.
ತಾಲ್ಲೂಕಿನ ಮನ್ಸಲಾಪುರದಲ್ಲಿ ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬದಲಾಗುತ್ತಿರುವ ಸಾಮಾಜಿಕ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹಾಯ, ಸಹಕಾರ, ಸಹಬಾಳ್ವೆ, ಪ್ರೀತಿ– ವಿಶ್ವಾಸ ಹಾಗೂ ಭಾವೈಕ್ಯತೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಮೊಬೈಲ್ ಬಳಕೆಯಿಂದ ಯುವ ಜನಾಂಗ ದಾರಿತಪ್ಪುವ ಸ್ಥಿತಿಯಲ್ಲಿದೆ. ಎನ್ಎಸ್ಎಸ್ ಶಿಬಿರದಿಂದ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ. ಶಿಬಿರದಲ್ಲಿ ಮತದಾನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು.
ಪ್ರಾಚಾರ್ಯ ಸಿದ್ಧಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಸ್ವಯಂಸೇವಕರಾದ ಲಿಂಗಾರೆಡ್ಡಿ, ಚನ್ನಬಸವ, ಮಹಾರಾಜ ಮತ್ತು ಮಹೇಶಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮಾಧಿಕಾರಿ ಶ್ರೀನಿವಾಸ ರಾಯಚೂರುಕರ್ ವರದಿ ವಾಚಿಸಿದರು.
ಮನ್ಸಲಾಪುರದ ಲಿಂಗಯ್ಯ ದಿಡ್ಡಿ, ಮಹಾದೇವಪ್ಪಗೌಡ ಮಾಲಿಪಾಟೀಲ, ಫಾಲಾಕ್ಷಗೌಡ ಮಾಲಿಪಾಟೀಲ, ಸಯ್ಯದಸಾಬ್, ಸಹ ಪ್ರಾಧ್ಯಾಪಕರಾದ ಬಸವರಾಜಪ್ಪ, ನಾಗಭೂಷಣ, ಪಿ.ವೆಂಕಟೇಶ, ಅಳ್ಳಪ್ಪ, ವಿಜಯಕುಮಾರ, ಎಂ.ಸುನೀತಾ ಇದ್ದರು.