ಮನ್ಸಲಾಪುರ (ಶಕ್ತಿನಗರ): ನರೇಗಾ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ನೂತನ ಜಿಲ್ಲಾ ಉಪ ವಿಭಾಗಧಿಕಾರಿ ರಜನಿಕಾಂತ್ ಹೇಳಿದರು.
ಮನ್ಸಲಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ನರೇಗಾ ಯೋಜನೆ ಅಡಿಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ನಂತರ ಅವರು, ಗ್ರಾಮದ ಕೆಲ ಕಡೆ ಸಂಪೂರ್ಣ ರಸ್ತೆಗಳು ಹಾಳಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ ಕಡೆ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಪಿಡಿಒ ಅನ್ನಪೂರ್ಣ ಅವರಿಗೆ ಸೂಚಿಸಿದರು.
ಪುಸ್ತಕ ಮತ್ತು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನ ಹೆಚ್ಚಾಗುತ್ತದೆ. ಯುವಪೀಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯ ಕಟ್ಟಡದಲ್ಲಿ ಇಟ್ಟಿರುವ ಪುಸ್ತಕಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯಬೆಲೆ ಅಂಗಡಿಗೆ ತೆರಳಿ ಅಂತ್ಯೋದಯ, ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳ ಫಲಾನುಭವಿಗಳಿಗೆ ಹಂಚಿಕೆ ಆಗುವ ಆಹಾರ ಧಾನ್ಯಗಳ ಬಗ್ಗೆ ಜನರಿಂದ ಅವರು ಮಾಹಿತಿ ಪಡೆದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ಮಕ್ಕಳ ಕಲಿಕೆ ಕುರಿತು ಮಾಹಿತಿ ಪಡೆದ ನಂತರ, ದಿನನಿತ್ಯ ಬಿಸಿಯೂಟದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ, ಶಾಲೆ ಬಿಟ್ಟಿರುವ ಮಕ್ಕಳ ಸಂಖ್ಯೆ, ಹಾಜರಾತಿ ಬಗ್ಗೆ ಅವರು ಮಾಹಿತಿ ಪಡೆದರು.
ಮನ್ಸಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರಿ ಆಂಜನೇಯ ನಾಯಕ, ಉಪಾಧ್ಯಕ್ಷ ಮಹಾದೇವಪ್ಪಗೌಡ, ಪಿಡಿಒ ಅನ್ನಪೂರ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಶಿಕ್ಷಕರು ಇದ್ದರು.