ಮಸ್ಕಿ: ಸರ್ಕಾರದ ಕಂದಾಯ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ‘ಕಂದಾಯ ಇಲಾಖೆ ರೈತರ ಮನೆ ಬಾಗಿಲಿಗೆ' ಯೋಜನೆಯನ್ನು ಅಧಿಕಾರಿಗಳು ರೈತರಿಗೆ ಸರಿಯಾಗಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಕರೆ ನೀಡಿದರು.
ತಾಲ್ಲೂಕಿನ ಗುಡದೂರು ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಹಾಗೂ ಸಾರ್ವಜನಿಕರು ಪಹಣಿ ಸೇರಿದಂತೆ ಕಂದಾಯ ಇಲಾಖೆ ವ್ಯಾಪ್ತಿಯ ಕೆಲಸಗಳಿಗೆ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಅವರ ಮನೆ ಬಾಗಿಲಿಗೆ ಹೋಗಿ ಮುಟ್ಟಿಸುವ ಕಂದಾಯ ಇಲಾಖೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದ ಯಶಸ್ವಿ ಗೆ ಅಧಿಕಾರಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ತಹಶೀಲ್ದಾರ್ ಕವಿತಾ ಆರ್.ಮಾತನಾಡಿ, ‘ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ತಾಲ್ಕೂಕಿನ ಎಲ್ಲಾ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ತಾಲ್ಲೂಕಿನಾದ್ಯಂತ ಯೋಜನೆಯ ಲಾಭವನ್ನು ರೈತರಿಗೆ ನೀಡುವ ಕಾರ್ಯಕ್ರಮ ನಡೆಸಲಿದ್ದಾರೆ’ ಎಂದರು.
ತಹಶೀಲ್ದಾರ್ (ಗ್ರೆಡ್2) ಪ್ರಭಕಾರ್ ಭಟ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.