ರಾಯಚೂರು: ಜಿಲ್ಲೆಯ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿ ಲಾಕ್ಡೌನ್ ಕುರಿತು ಚರ್ಚಿಸಿದರು.
ಜಿಲ್ಲೆಯಲ್ಲಿರುವ ನಿರ್ಗತಿಕರು, ಪಡಿತರ ಚೀಟಿ ಇಲ್ಲದವರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರೆಲ್ಲರಿಗೂ ಮಾನವೀಯ ನೆಲೆಯಲ್ಲಿ ಸಹಾಯ ಒದಗಿಸಬೇಕು ಎಂದು ಕೋರಿದರು.
ಜಿಲ್ಲೆಯ ಬಡವರಿಗೆ ಉಚಿತವಾಗಿ ಹಾಲು ವಿತರಿಸಲು 25 ಸಾವಿರ ಲೀಟರ್ ಅಗತ್ಯವಾಗುತ್ತದೆ. ಈಗ 10 ಸಾವಿರ ಲೀಟರ್ ಮಾತ್ರ ಒದಗಿಸಲಾಗುತ್ತಿದ್ದು, ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಪಡೆದು ಪ್ರತಿ ಬಡ ಕುಟುಂಬಕ್ಕೆ 0.5 ಅರ್ಧ ಲೀಟರ್ ಹಾಲು ತಲುಪಿಸಬೇಕು. ಇದರಲ್ಲಿ ಗೊಂದಲ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಕೋರಿದರು.
ಇಂದಿರಾ ಕ್ಯಾಂಟಿನ್ ಮೂಲಕ ಬಡವರಿಗೆ ಆಹಾರ ವಿತರಿಸಬೇಕು. ತರಕಾರಿ ಮಾರಾಟಗಾರರಿಗೆ ಯೋಗ್ಯ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ, ಶಾಸಕ ಬಸನಗೌಡ ದದ್ದಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ನಾಯಕ, ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ಕೆ.ಶಾಂತಪ್ಪ, ಎ.ವಸಂತಕುಮಾರ್, ಬಸವರಾಜರೆಡ್ಡಿ ಇದ್ದರು.