ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯ ವೈದ್ಯರು ಸಮಯಪಾಲನೆ ಮಾಡುತ್ತಿಲ್ಲ. ತಮ್ಮ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಮಾಜ ಸೇವಕ ಎನ್.ಎಮ್.ಮೈತ್ರಿಕರ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ವಿಭಾಗದ ವೈದ್ಯರು ಮತ್ತು ಮುಖ್ಯಸ್ಥರು ನಿಯಮದ ಪ್ರಕಾರ ಮುಂಜಾನೆ 9 ಗಂಟೆಗೆ ಹಾಜರಿ ಇರಬೇಕು. ಆದರೆ, ವೈದ್ಯರು ರಿಮ್ಸ್ ಆಸ್ಪತ್ರೆಗೆ ಕೇವಲ ಹಾಜರಾತಿಗಾಗಿ 10 ಗಂಟೆಗೆ ತೆರಳುತ್ತಾರೆ. ಆನಂತರ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಈ ಕಾರಣದಿಂದ ರಿಮ್ಸ್ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೆ ಹಲವು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು.
ರಿಮ್ಸ್ ಆಸ್ಪತ್ರೆ ಎಲ್ಲಾ ವಿಭಾಗ ವೈದ್ಯರುಗಳು ಮತ್ತು ಮುಖ್ಯಸ್ಥರು ಕೂಡಲೇ ಸಮಯ ಪಾಲನೆ ಮಾಡಬೇಕು. ಇಲ್ಲವೇ ಅಮಾನತಿಗೆ ಆದೇಶಿಸಬೇಕು ಎಂದು ರಾಯಚೂರು ವಿಜ್ಞಾನ ಸಂಸ್ಥೆ ನಿರ್ದೇಶಕರಿಗೆ ಪತ್ರದ ಮುಖಾಂತರ ದೂರು ನೀಡಲಾಗಿದೆ. ವೈದ್ಯರ ಮೇಲೆ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮುನಿಸ್ವಾಮಿ, ಪರಶುರಾಮ್, ಸತೀಶ್, ತಮೇಶ್, ಪಿ. ನರಸಿಂಹಲು, ಸೀನು ಪತ್ರಿಕಾಗೋಷ್ಠಿಯಲ್ಲಿ ಇದ್ದರು.