ರಾಯಚೂರು: ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕಾರ್ಯವಾಗಬೇಕಿದ್ದು ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಜೆಸಿಐ ಸಂಸ್ಥೆಯ ಅಧ್ಯಕ್ಷ ರಿಕಬ್ ಚಂದ್ ಜೈನ್ ಸಲಹೆ ನೀಡಿದರು.
ತಾಲ್ಲೂಕಿನ ಉಡಮಗಲ್ ಖಾನಾಪುರ ಗ್ರಾಮದ ಶಾಲೆಯಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಯಲ್ಲಿ ಉತ್ತಮ ವಾತಾವರಣ ಇರಬೇಕಾದರೆ ಶಿಕ್ಷಕರು, ಮುಖ್ಯಗುರುಗಳ ಪರಿಶ್ರಮ ಅಗತ್ಯ. ಇವರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗಲೇ ಪ್ರತಿಭಾವಂತ ವಿದ್ಯಾರ್ಥಿಗಳು ಮುಂದೆ ಬರುತ್ತಾರೆ ಎಂದು ಹೇಳಿದರು.
ಶಾಲೆಯ ಮುಖ್ಯಗುರು ದಂಡಪ್ಪ ಬಿರಾದರ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಶಿಕ್ಷಕ ಪಾಂಡುರಂಗ ದೇಸಾಯಿ, ಶರಣಪ್ಪ ನಾಯ್ಕ್, ಲಕ್ಷ್ಮಿದೇವಿ, ಶಿವಲೀಲಾ, ರೂಪಾ, ಜೆಸಿಐ ಸಂಸ್ಥೆಯ ನಿರ್ದೇಶಕ ಮಹಾವೀರ ಚೌಹಾಣ್, ಅರುಣಾ ಬಿರಾದರ ಇದ್ದರು.