ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದು ಬೃಹತ್ ಮಟ್ಟದ ಉದ್ಯಮಶೀಲರಾಗುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ಹತ್ತು ದಿನಗಳ ಉದ್ಯಮಶೀಲತಾ ಕಾರ್ಯಕಾರಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕೃಷಿ-ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಲವು ಸಂಶೋಧನೆಗಳನ್ನು ನಡೆಸಿ ಯಶಸ್ವಿಗೊಂಡಿದೆ. ಉದ್ಯಮಶೀಲತೆ ತರಬೇತಿದಾರರಿಗೆ ನಮ್ಮ ವಿಶ್ವವಿದ್ಯಾಲಯದ ಆವಿಷ್ಕಾರಗಳು ಸಹಾಯವಾಗಲಿದೆ ಎಂದರು.
ಜಿಲ್ಲಾ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಕೈಗಾರಿಕೆ ಮತ್ತು ಉದ್ಯಮ ಆರಂಭಕ್ಕೆ ತರಬೇತಿ ಅತ್ಯಂತ ಮುಖ್ಯವಾಗಿದೆ. ತರಬೇತಿ ಪಡೆದವರು ಉದ್ಯಮಿದಾರರು ಕಾನೂನು ಚೌಕಟ್ಟಿನಲ್ಲಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ್, ಜಿಲ್ಲಾ ಅಗ್ರ ಶ್ರೇಣಿಯ ಬ್ಯಾಂಕ್ ಮುಖ್ಯಸ್ಥ ಬಾಬು ಬಳಗಾನೂರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಾಜೇಶ್ ಬಾವಗಿ ಇದ್ದರು.