ಸಿರವಾರ: ‘ಮೂರು ವರ್ಷಗಳಿಂದ ಉದ್ಘಾಟನೆಯಾಗದೇ ಬಿದ್ದಿದ್ದ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಆದರೆ ಅದಕ್ಕೆ ಸೌಲಭ್ಯ ಕಲ್ಪಿಸಿಲ್ಲ. ಕೂಡಲೇ ಸೌಕರ್ಯ ಒದಗಿಸಬೇಕು’ ಎಂದು ಮಾಜಿ ಶಾಸಕ ಹಂಪಯ್ಯ ನಾಯಕ ಒತ್ತಾಯಿಸಿದರು.
ಭಾನುವಾರ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು,‘ಕಟ್ಟಡ ಒಂದನ್ನು ಬಿಟ್ಟು ಯಾವುದೇ ವ್ಯವಸ್ಥೆ ಇಲ್ಲದ ಕೇಂದ್ರವನ್ನು ಬೇಕಾಬಿಟ್ಟಿಯಾಗಿ ಉದ್ಘಾಟನೆ ಮಾಡಲಾಗಿದೆ. ಇದು ಸ್ಥಳೀಯ ಶಾಸಕರ ಅಸಹಾಯಕತೆ ತೋರಿಸುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರೇ ಉದ್ಘಾಟಿಸಿ 15 ದಿನ ಕಳೆದರೂ ಸರಿಯಾದ ವ್ಯವಸ್ಥೆ ಇಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಂಕಷ್ಟದಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆಯಿಂದ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಇಲ್ಲಿಯವರೆಗೂ ಯಾವ ಸಾಮಗ್ರಿಯೂ ಬಂದಿಲ್ಲ. ಇದರ ಉದ್ಘಾಟನೆಯಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದರು.
ಕೂಡಲೇ ನುರಿತ ವೈದ್ಯರು, ಕೇಂದ್ರಕ್ಕೆ ಬೇಕಾದ ಸಾಮಗ್ರಿ, ಸಲಕರಣೆಗಳಗಳ ವ್ಯವಸ್ಥೆ ಮಾಡಿ ಜನರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ವೈದ್ಯಾಧಿಕಾರಿ ಪರಿಮಳಾ ಮೈತ್ರಿ, ಮುಖಂಡರಾದ ಶಿವುಕುಮಾರ ಚುಕ್ಕಿ, ರಮೇಶ ದರ್ಶನಕರ್, ಎಸ್.ದಾನನಗೌಡ, ವೀರೇಶ ಗಣೇಕಲ್, ಶಿವಶರಣ ಅರಕೇರಿ ಹಾಗೂ ಸೂರಿ ದುರುಗಣ್ಣ ಇದ್ದರು.