ಬೆಳಗಾವಿ: ಹ್ಯಾಟ್ರಿಕ್ ಗೆಲುವಿನ ಸಾಧಕ ಬಿಜೆಪಿಯ ಲಕ್ಷ್ಮಣ ಸವದಿ ಅವರನ್ನು ಮಣಿಸುವುದಕ್ಕಾಗಿ ಕಾಂಗ್ರೆಸ್
ಮುಖಂಡರು,ಸಹೋದರರಾದ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರದಲ್ಲಿ ತೊಡಗಿರುವುದರಿಂದ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗಾಗಿದೆ.
ಇಲ್ಲಿ 11 ಮಂದಿ ಉಮೇದುವಾರರಿದ್ದಾರೆ. ಕಾಂಗ್ರೆಸ್ನಿಂದ ಮಹೇಶ ಕುಮಠಳ್ಳಿ, ಜೆಡಿಎಸ್ನಿಂದ ಗಿರೀಶ ಬುಟಾಳಿ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ತೋರಿದರೂ, ಕಾಂಗ್ರೆಸ್–ಬಿಜೆಪಿ ನಡುವೆ ಹೆಚ್ಚಿನ ಪೈಪೋಟಿ ಕಂಡುಬಂದಿದೆ. ಕ್ಷೇತ್ರ ಉಳಿಸಿಕೊಳ್ಳಲು ಕಮಲ ಪಕ್ಷ, ವಶಪಡಿಸಿಕೊಳ್ಳಲು ‘ಕೈ’ ತೀವ್ರ ಪ್ರಯತ್ನ ನಡೆಸಿವೆ.
1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ನ ಶಹಜಹಾನ ಡೊಂಗರಗಾಂವ ವಿರುದ್ಧ ಸೋತಿದ್ದ ಸವದಿ ಅವರಿಗೆ, 2004, 2008 ಮತ್ತು 2013ರಲ್ಲಿ ಮತದಾರರು ಆಶೀರ್ವದಿಸುತ್ತಾ ಬಂದಿದ್ದಾರೆ. ಸತತ 4ನೇ ಗೆಲುವಿಗಾಗಿ ಶ್ರಮಿಸುತ್ತಿರುವ ಅವರಿಗೆ, ಪ್ರಮುಖ ಪಕ್ಷದ ಇಬ್ಬರು ಎಂಜಿನಿಯರ್ ಅಭ್ಯರ್ಥಿಗಳು ಪೈಪೋಟಿ ನೀಡುತ್ತಿದ್ದಾರೆ.
ಪ್ರತಿಷ್ಠೆಯಾಗಿ...: 2013ರಲ್ಲೂ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಹೇಶ ಸೋನುಭವಿಸಿ ದ್ದರು. ಈ ಕಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜಾರಕಿಹೊಳಿ
ಸಹೋದರರ ಜೊತೆ ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹಾಗೂ ಮುಖಂಡರೂ ಕೈಜೋಡಿಸುತ್ತಿದ್ದಾರೆ. ‘ಕಾಂಗ್ರೆಸ್ ಗೆಲುವಿಗಾಗಿ ಅಥಣಿಯಲ್ಲಿಯೇ ಮನೆ ಮಾಡುತ್ತೇನೆ’ ಎಂದು ರಮೇಶ ಜಾರಕಿಹೊಳಿ ಈಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಸವಾಲು–ಜವಾಬಿನ ಹೇಳಿಕೆಗಳನ್ನು ಎರಡೂ ಪಕ್ಷಗಳ ಮುಖಂಡರು ನೀಡಿದ್ದಾರೆ. ಇದರಿಂದಾಗಿ, ಹಲವು ಚರ್ಚೆಗಳು ಇಲ್ಲಿ ನಡೆಯುತ್ತಿವೆ.
ಬಿಜೆಪಿ ಅಭ್ಯರ್ಥಿಗೆ ಆರ್ಎಸ್ಎಸ್ ಬೆಂಬಲವೂ ದೊರೆಯುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ಗೆ ಬಹುಜನ ಸಮಾಜ ಪಕ್ಷ ಹಾಗೂ ಎಐಎಂಐಎಂ ಕೂಡ ಬೆಂಬಲ ಘೋಷಿಸಿವೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೂಡ ಆ ಪಕ್ಷದ ಪರ ಪ್ರಚಾರ ನಡೆಸಿದ್ದಾರೆ.
ಲೆಕ್ಕಾಚಾರಗಳು: ‘ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ, ಮತದಾರರು ಬದಲಾವಣೆ ಬಯಸಿದ್ದಾರೆ’ ಎಂದು ಪ್ರತಿಪಕ್ಷದವರು ಪ್ರಚಾರ ನಡೆಸುತ್ತಿದ್ದಾರೆ. ‘ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಕೈಹಿಡಿಯಲಿವೆ’ ಎನ್ನುವ ವಿಶ್ವಾಸದಲ್ಲಿ ಹಾಲಿ ಶಾಸಕ ಲಕ್ಷ್ಮಣ ಸವದಿ ಇದ್ದಾರೆ. ಅವರಿಗೆ ಪಕ್ಕದ ಕ್ಷೇತ್ರ ಕಾಗವಾಡದ ಶಾಸಕ ಭರಮಗೌಡ ಕಾಗೆ ಕೂಡ ‘ಆಸರೆ’ಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳ ಮೇಲಿರುವ ‘ಹಿಡಿತ’ ನೆರವಾಗಲಿದೆ ಎಂದು ನೆಚ್ಚಿಕೊಂಡಿದ್ದಾರೆ.
ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಮತ್ತಿತರ ಸಮಸ್ಯೆಗಳು, ಅಭಿವೃದ್ಧಿ ವಿಷಯಗಳ ಚರ್ಚೆಗಳು ಇಲ್ಲಿ ಮುನ್ನಲೆಗೆ ಬರುತ್ತಿಲ್ಲ. ವೈಯಕ್ತಿಕ ಆರೋಪ–ಪ್ರತ್ಯಾರೋಪಗಳು ಹಾಗೂ ಪ್ರತಿಷ್ಠೆಗಳಷ್ಟೇ ಗೋಚರಿಸುತ್ತಿವೆ.
ಮತದಾರರ ಸಂಖ್ಯೆ
ಪುರುಷರು 1,07,961
ಮಹಿಳೆಯರು 1,01,317
ಒಟ್ಟು 2,09,178
ಕಣದಲ್ಲಿರುವವರು
ಲಕ್ಷ್ಮಣ ಸವದಿ ಬಿಜೆಪಿ
ಮಹೇಶ ಕುಮಠಳ್ಳಿ ಕಾಂಗ್ರೆಸ್
ಗಿರೀಶ ಬುಟಾಳಿ ಜೆಡಿಎಸ್
ನಿಂಗಪ್ಪ ಗುರವ ಪ್ರಜಾ ಪರಿವರ್ತನ ಪಾರ್ಟಿ
ಬಸಪ್ಪ ಹಂಚಿನಾಳ ಹಿಂದೂಸ್ತಾನ ಜನತಾ ಪಾರ್ಟಿ
ಮಹಾವೀರ ಮನೋಜಿ ಎಐಎಂಇಪಿ
ಮೆಹಬೂಬ್ ಶೇಕ್ ಬಹುಜನ ಮುಕ್ತಿ ಪಕ್ಷ
ವಿಠ್ಠಲ ಪೂಜಾರಿ ನಮ್ಮ ಕಾಂಗ್ರೆಸ್
ಎ.ಬಿ. ಪಾಟೀಲ, ರಾಜೇಶ ಸಿಂಗೆ, ಶಿವಮಲ್ಲಪ್ಪ ಬಸಪ್ಪ– ಪಕ್ಷೇತರರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.