ರಾಯಚೂರು: ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಯುವಕರು ಸಕ್ರಿಯ ಪಾತ್ರ ವಹಿಸಬೇಕು. ಭಯೋತ್ಪಾದನೆ ವಿರುದ್ಧ ಯುವಕರು ಹೋರಾಡಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ನವೀನ್ ಸಾಮ್ಯುವೇಲ್ ಹೇಳಿದರು.
ಭಾರತ ಸರಕಾರ ನೆಹರು ಯುವ ಕೇಂದ್ರ ರಾಯಚೂರು ಭಾರತ ಸೇವಾದಳ, ಶ್ರೀ ಚಾಮುಂಡೇಶ್ವರಿ ಮಹಿಳಾ ಸ್ವ-ಸಹಾಯ ಸಂಘ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಈಚೆಗೆ ಏರ್ಪಡಿಸಿದ್ದ ಭಯೋತ್ಪಾದನೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರನ್ನು ಭಯೋತ್ಪಾದನೆಯಿಂದ ದೂರ ಇರಿಸುವುದು ಮತ್ತು ಭಯೋತ್ಪಾದನೆಯು ರಾಷ್ಟ್ರೀಯ ಹಿತಾಸಕ್ತಿಗೆ ಹೇಗೆ ಪೂರ್ವಾಗ್ರಹವಾಗಿ ಪರಿಣಮಿಸಿದೆ ಎಂಬುದರ ಅರಿವು ಮೂಡಿಸುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಿದರು.
ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಸಾವು, ಮುಂಬೈ ಮೇಲಿನ ದಾಳಿ ಮತ್ತು ಪುಲ್ವಾಮಾ ದಾಳಿಯು ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿಮಾಡುವ ಭಯೋತ್ಪಾದನೆಯ ಪ್ರಯತ್ನಗಳಾಗಿದ್ದವು ಎಂದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಕಾಶ ಮಾತನಾಡಿ, ಯುವಕರು ನೆಹರು ಯುವ ಕೇಂದ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಈ ಮೂಲಕ ಜಿಲ್ಲೆಯ ಅಭಿವೃದ್ದಿಯಲ್ಲಿ ತಮ್ಮದೇ ಆದ ಕಾಣಿಕೆ ನೀಡಬೇಕು ಎಂದು ತಿಳಿಸಿದರು.
ಎಲ್ಲರಿಗೂ ಭಯೋತ್ಪಾದನೆ ವಿರೋಧಿ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ನೆಹರು ಯುವ ಕೇಂದ್ರದ ರಾಷ್ಟ್ರೀಯ ಸ್ವಯಂ ಸೇವಕ ತಿರುಮಲೇಶ ಸ್ವಾಗತಿಸಿದರು. ನಾಗೇಶ ವಂದಿಸಿದರು.