ರಾಯಚೂರು:ನಾರಾಯಣಪುರ ಜಲಾಶಯದಿಂದ ಸೋಮವಾರ ಬೆಳಿಗ್ಗೆ ದಿಢೀರನೆ 1.16 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಯಿತು. ಒಮ್ಮೆಲೆ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿದ ಕಾರಣ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತು.
ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಕೃಷ್ಣಾ ನದಿ ಕೊಳ್ಳಗಳಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ನದಿ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ನದಿತೀರಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ನಾರಾಯಣಪುರ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್ ಅಡಿ ಒಳಹರಿವು ಇದೆ. ಬೆಳಿಗ್ಗೆ 8 ಗಂಟೆಗೆ 60 ಸಾವಿರ ಕ್ಯುಸೆಕ್ ಅಡಿ ಇದ್ದ ಹೊರಹರಿವು ಪ್ರಮಾಣವನ್ನು 10.30ಕ್ಕೆ 1.16 ಲಕ್ಷಕ್ಕೆ ದಿಢೀರ್ ಹೆಚ್ಚಿಸಲಾಗಿದೆ. ನದಿತೀರ ಗ್ರಾಮಗಳಲ್ಲಿ ಜಾಗೃತಿ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.