ರಾಯಚೂರು: ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 150ನೇ ಜನ್ಮದ ವರ್ಷಾಚರಣೆ ನಿಮಿತ್ತ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧೀಜಿ ಜೀವನ ಸಾಧನೆ ಕುರಿತ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಎಸ್.ಕೆ.ಮೇಟಿ ಸೋಮವಾರ ಉದ್ಘಾಟಿಸಿದರು.
ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಗಾಂಧೀಜಿ ಜಗತ್ ಪ್ರಸಿದ್ಧರಾಗಿದ್ದು, ದೇಶದಲ್ಲಿ ಹಲವು ಅನಿಷ್ಠ ಪದ್ಧತಿಗಳನ್ನು ಹೊಡೆದೊಡಿಸಿ ಸುಧಾರಣೆಗೆ ಯತ್ನಿಸಿದ್ದಾರೆ. ಅವರ ಜೀವನ ಪಯಣವನ್ನು ಛಾಯಾಚಿತ್ರಗಳ ಮೂಲಕ ಜನರಿಗೆ ತಿಳಿಸುತ್ತಿರುವುದು ಶ್ಲಾಘನೀಯ ಎಂದರು.
ಯಾವುದೇ ಅಧಿಕಾರಕ್ಕೆ ಆಸೆ ಪಡೆದೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಮಹಾತ್ಮರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ತಾಂತ್ರಿಕ ಕಾಲೇಜಿನ ಮುಖ್ಯಸ್ಥ ವೀರನಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಜಿ.ರವಿರಾಜ್, ದಂಡಪ್ಪ ಬಿರಾದಾರ ಇದ್ದರು.
ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯದಾದ್ಯಂತ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.