ರಾಯಚೂರು: ಗಂಗಾಮತಸ್ಥ ಸಮಾಜದಲ್ಲಿ ಶಿಕ್ಷಣದ ಕೊರತೆಯಿದ್ದು, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದವರು ಶೈಕ್ಷಣಿಕವಾಗಿ ಮುಂದೆ ಬರೆಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಬೆಳವಣಿಗೆ ಜವಾಬ್ದಾರಿ ಕೇವಲ ಶಿಕ್ಷಕರ ಮೇಲೆ ಇಲ್ಲ. ಪೋಷಕರು ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.
ಜಿಲ್ಲಾ ಗಂಗಾಮತಸ್ಥರ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಸಮಾಜದಲ್ಲಿ ಬಹಳಷ್ಟು ಜಾಗೃತಿ ಮೂಡಿದ್ದು, ಎಲ್ಲ ರಂಗಗಳಲ್ಲೂ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗಗಳಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಇಂದಿನ ಕಾರ್ಯಕ್ರಮ ಹಿಂದುಳಿದ ಸಮಾಜದ ಒಗ್ಗಟ್ಟಿಗೆ ನಿದರ್ಶನವಾಗಿದೆ. ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆಗೆ ಅನೇಕರು ಹರ್ಷವ್ಯಕ್ತಪಡಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಸಹ ಶಿಕ್ಷಕ ಗೋಪಾಲ ನಾಯಕ ಉಪನ್ಯಾಸ ನೀಡಿ, 12ನೇ ಶತಮಾನದ ಶರಣರು ಜನರಿಗಾಗಿ ಬದುಕಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಆಗಿನ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಡಿವಾಳ ಮಾಚಿದೇವ ನೇರ ನುಡಿಯ ಮೂಲಕ ಇದ್ದದ್ದನ್ನು ಇದ್ದಂಗೆ ಹೇಳುತ್ತಿದ್ದರು. ಚೌಡಯ್ಯನವರ ವಚನಗಳು ಕೂಡ ಅತ್ಯಂತ ಸತ್ವಯುತವಾಗಿವೆ. ಅವರ 350 ವಚನಗಳು ಮಾತ್ರ ಲಭ್ಯವಿವೆ ಎಂದರು.
ಇದೇ ವೇಳೆ ಸಂಸದ ಬಿ.ವಿ.ನಾಯಕ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ, ನಗರಸಭೆ ಸದಸ್ಯರಾದ ಲಲಿತಾ ಕಡಗೋಳ, ನಾಗರಾಜ, ಬಿ.ರಮೇಶ, ಮುಖಂಡರಾದ ಕಡಗೋಳ ಆಂಜನೇಯ, ಕಡಗೋಳ ಶರಣಪ್ಪ, ತಾಯಣ್ಣ ನಾಯಕ, ಜಿ.ಶಿವಮೂರ್ತಿ, ಕೆ.ಎಂ.ಲಕ್ಷ್ಮಣ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಸ್ವಾಗತಿಸಿದರು.