ರಾಯಚೂರು: ಮಾನ್ವಿ ಪಟ್ಟಣದ ಶಾಸಕರ ಭವನದ ಮುಂಭಾಗದ ಸಾರ್ವಜನಿಕ ಉದ್ಯಾನವನ್ನು ಅತಿಕ್ರಮಣ ಮಾಡಿಕೊಂಡು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಅವರು ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಎಂದು ಉದ್ಯಾನ ಉಳಿಸಿ ಹೋರಾಟ ಸಮಿತಿ ಸಂಚಾಲಕ ಕೆ. ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ವಿ ಪಟ್ಟಣದ ಸರ್ವೇ ನಂಬರ್ 467/ಎ ರಲ್ಲಿ 6.30 ಎಕರೆ ಜಾಗದಲ್ಲಿ 1964ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಾಲೊನಿ ನಿರ್ಮಾಣ ಮಾಡಿದ್ದು ಅಲ್ಲಿ ಉದ್ಯಾನಕ್ಕೆ ಜಾಗವನ್ನು ಮೀಸಲಿಡಲಾಗಿತ್ತು. ಸಾರ್ವಜನಿಕ ಉದ್ಯಾನ ಜಾಗವನ್ನು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ಮತ್ತು ಮನೆ ಕಟ್ಟಲು ಮುಂದಾಗಿದ್ದಾರೆ. ಕಾಂಪೌಂಡ್ ತೆರವು ಗೊಳಿಸಲು ದೂರು ನೀಡಿದರೂ ಪುರಸಭೆಯ ಮುಖ್ಯಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪುರಸಭೆಯ ಅಧಿಕಾರಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿ, ಸಾರ್ವಜನಿಕ ಉದ್ಯಾನವನ ಅತಿಕ್ರಮಣಕ್ಕೆ ಸಹಕಾರ ನೀಡಿದ್ದಾರೆ. ಈ ಹಿಂದೆ ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದೇಶವನ್ನು ಧಿಕ್ಕರಿಸಿ ಸಾರ್ವಜನಿಕ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
‘ನನ್ನ ರಾಜಕೀಯ ಜೀವನದಲ್ಲಿ ಎಲ್ಲಿಯೂ ಕಾನೂನುಬಾಹಿರ ಜಾಗ ಅತಿಕ್ರಮಿಸಿಲ್ಲ. ಮಾನ್ವಿಯಲ್ಲಿ ಪಂಪಾ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ 1978 ರಲ್ಲಿ 60/90 ನಿವೇಶನ ಹಂಚಿಕೆಯಾಗಿದ್ದನ್ನು ನೋಂದಣಿ ಮಾಡಿಕೊಂಡಿದ್ದೇನೆ. ಈ ಹಿಂದೆಯೇ ಒಬ್ಬರು ಹೈಕೋರ್ಟ್ಗೆ ತರಕಾರು ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಕೋರ್ಟ್ನಿಂದ ಪರ್ಮನಂಟ್ ಇಂಜೆಕ್ಷನ್ ಆರ್ಡರ್ ಆಗಿದೆ’ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ ಅವರು ಸ್ಪಷ್ಟನೆ ನೀಡಿದ್ದಾರೆ.