ರಾಯಚೂರು: ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿದ್ದ 9 ದಿನಗಳ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬುಧವಾರ ಮಧ್ಯರಾತ್ರಿ ಆರಂಭವಾದ ಕಾರಣ ಗುರುವಾರ ಮಧ್ಯಾಹ್ನದವರೆಗೂ ವಿಘ್ನೇಶ್ವರನ ಮೂರ್ತಿಗಳ ವಿಸರ್ಜನೆ ನಡೆಯಿತು.
ರಾಯಚೂರು ನಗರದಲ್ಲಿ ಒಟ್ಟು 140 ಸಾರ್ವಜನಿಕ ಗಣಪತಿಗಳು ಸೇರಿ ಜಿಲ್ಲೆಯ ವಿವಿಧೆಡೆ 250 ಗಣಪತಿಗಳ ವಿಸರ್ಜನೆ ಕಾರ್ಯ ಬುಧವಾರ ತಡ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ನಡೆಯಿತು. ನಗರದಲ್ಲಿ ತಡವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿ ದೇವರ ವಸ್ತುಗಳ ಲೀಲಾವು ಮಾಡಲಾಯಿತು. ಹೀಗಾಗಿ ಮತ್ತಷ್ಟು ವಿಳಂಬವಾಯಿತು.
ನಗರದಲ್ಲಿ ಪ್ರಮುಖ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಬೃಹತ್ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಡಾಲ್ಬಿ ನಿಷೇಧಿಸಿದ್ದರೂ ಗಣೇಶ ಮಂಡಳಗಳು ಲಕ್ಷಾಂತರ ರೂಪಾಯಿ ಮುಂಗಡ ಹಣ ನೀಡಿ ಹೈದರಾಬಾದ್, ಸೋಲಾಪುರದಿಂದ ಡಾಲ್ಬಿಗಳನ್ನು ತರಿಸಿದ್ದರು.
ಟ್ರ್ಯಾಕ್ನಲ್ಲಿ ಇಡಲಾಗಿದ್ದ ಡಾಲ್ಬಿಗಳ ಸುತ್ತಲ್ಲೂ ಝಗಮಗಿಸುವ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಪ್ರಸಿದ್ಧ ಕನ್ನಡ, ಹಿಂದಿ, ತೆಲುಗು ಹಾಗೂ ಮರಾಠಿ ಚಲನಚಿತ್ರಗಳ ಕವಿಗಡಚ್ಚುವ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.
ಮಕ್ಕಳು ಸಹ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು ಕೆಲ ಮಹಿಳೆಯರು ಮಕ್ಕಳೊಂದಿಗೆ ಹೆಜ್ಜೆ ಹಾಕಿ ಹುರಿದುಂಬಿಸಿದರು.
ಮುಳುಗದ ಏಕದಂತ: ದೊಡ್ಡ ಗಣಪತಿಗಳ ವಿಸರ್ಜನೆಗಾಗಿಯೇ ನಗರಸಭೆಯಿಂದ ಎರಡು ಕ್ರೇನ್ಗಳ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡ ಮೂರ್ತಿಗಳಿಗೆ ಬೆಲ್ಟ್ ಕಟ್ಟಿ ಹೊಂಡದಲ್ಲಿ ಖಾಸಬಾವಿಯಲ್ಲಿ ಮುಳುಗಿಸಿದರೂ ಅವು ಮುಳಗದೇ ತೇಲುತ್ತಿದ್ದವು. ಮತ್ತೆ ಮತ್ತೆ ನೀರಿನಲ್ಲಿ ಮುಳಗಿಸಬೇಕಾಯಿತು.
ಪಿಒಪಿಗಳ ಗಣಪತಿಗಳೇ ಅಧಿಕ ಪ್ರಮಾಣದಲ್ಲಿ ಇದ್ದ ಕಾರಣ ಮೂರ್ತಿಗಳ ಕೈಕಾಲುಗಳು ತೇಲುತ್ತಿದ್ದವು. ಹೂಮಾಲೆಗಳನ್ನು ಮಾತ್ರ ಕೆರೆ ಮೇಲೆಯೇ ಪ್ರತ್ಯೇಕವಾಗಿ ತೆಗೆದಿರಿಸಿ ವಿಸರ್ಜನೆ ಮಾಡಲಾಯಿತು.
ಸಂಚಾರ ದಟ್ಟಣೆ: ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಸಾಗುತ್ತಿದ್ದರಿಂದ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೀಗಾಗಿ ಬೀದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಗಣಪತಿಗಳು ಟ್ರ್ಯಾಕ್ಟರ್ಗನಲ್ಲಿ ಸರತಿ ಸಾಲಿನಲ್ಲಿ ಬರುತ್ತಿದ್ದ ಕಾರಣ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು.
ಮಾವಿನಕೆರೆ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಎದುರಿನಿಂದ ವಾಹನಗಳು ಬರದಂತೆ ತಡೆಯಲಾಗಿತ್ತು. ಗಣೇಶ ವಿಸರ್ಜನೆ ದಶ್ಯ ಕಣ್ತುಂಬಿಕೊಳ್ಳಲು ಕುಟುಂಬದ ಸದಸ್ಯರೊಂದಿಗೆ ಬಂದಿದ್ದ ಅನೇಕ ಜನರು ಮಾವಿನಕೆರೆ ಉದ್ಯಾನ ಪಕ್ಕ ರಸ್ತೆ ಬದಿಯಲ್ಲಿ ವಾಹನಗಳ ನಿಲುಗಡೆ ಮಾಡಿದ್ದರು.
ಹೈರಾಣಾದ ಪೊಲೀಸರು: ರಾಯಚೂರು ನಗರದಲ್ಲಿ ಏಳನೆಯ ದಿನದ ಗಣಪತಿಗಳ ವಿಸರ್ಜನೆಯೂ ತಡವಾಗಿ ನಡೆದಿದ್ದಿಂದ ಪೊಲೀಸರು ನಿದ್ದೆಗೆಟ್ಟು ಬಂದೋಬಸ್ತ್ನಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಎಲ್ಲ ಪೊಲೀಸ್ ಸಿಬ್ಬಂದಿಗೆ ಕುಡಿಯುವ ನೀರು ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ವಾಹನಗಳಲ್ಲೇ ಅವರಿಗೆ ಆಹಾರದ ಪೊಟ್ಟಣಗಳನ್ನು ತಂದು ಹಂಚಲಾಯಿತು.
ಸಾರ್ಜಜನಿಕರ ಹಿತದೃಷ್ಟಿಯಿಂದ ಕೆರೆಯ ಪಕ್ಕದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಭಕ್ತರು ಕುಳಿತುಕೊಳ್ಳಲು ಅನುಕೂಲವಾಗುವಂತೆ ನಗರಸಭೆಯಿಂದಲೂ ಪೆಂಡಾಲ್ ಹಾಕಲಾಗಿತ್ತು.
ಅನೇಕ ಯುವಕರು ಒಂದೇ ಸ್ಥಳದಲ್ಲೇ ತಾಸುಗಟ್ಟಲೆ ನಿಂತು ಕುಣಿಯುತ್ತಿದ್ದ ಕಾರಣ ಮೆರವಣಿಗೆ ಮುಂದೆ ಸಾಗುವುದು ಕಷ್ಟವಾಗುತ್ತಿತ್ತು. ಪೊಲೀಸರು ತಿಳಿವಳಿಕೆ ನೀಡಿ, ಒಮ್ಮೆ ಒತ್ತಾಯದಿಂದ ಮುಂದೆ ಸಾಗುತ್ತಿದ್ದವರು. ಅದಕ್ಕೆ ಅಮಲಿನಲ್ಲಿದ್ದ ಯುವಕರು ಅಕ್ಷೇಪ ವ್ಯಕಸ್ತಪಡಿಸುತ್ತಿದ್ದರು.
ಗುರುವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಯುವಕರ ಎರಡು ಗುಂಪು ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡರು ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆ ಪ್ರದೇಶ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಾವಿನಕೆರೆ ಸಮೀಪ ಕೆಎಸ್ಆರ್ಪಿ ಸಿಬ್ಬಂದಿಯನ್ನು ನಿಯೋಜಿಸಿತ್ತು.
ಸೆ.29ರಂದು 11ನೇ ದಿನದ 71 ಗಣಪತಿಗಳು ವಿಸರ್ಜನೆಯಾಗಲಿವೆ. ಪೊಲೀಸರು ನಾಲ್ಕು ದಿನಗಳಿಂದ ಆಯಾಸಗೊಂಡಿರುವ ಕಾರಣ ದಿನಬಿಟ್ಟು ದಿನ ರಾತ್ರಿ ಪಾಳೆ ಡ್ಯೂಟಿ ಕೊಡಲಾಗಿದೆ. ರಾತ್ರಿ ಪಾಳೆಮುಗಿಸಿದವರಿಗೆ ಬೆಳಿಗ್ಗೆ ವಿಶ್ರಾಂತಿಗಾಗಿ ಬಿಡುಗಡೆ ಮಾಡಲಾಯಿತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.