ಹಟ್ಟಿ ಚಿನ್ನದ ಗಣಿ : ಹಟ್ಟಿ ಮುಖ್ಯರಸ್ತೆಯಿಂದ ಲಿಂಗಸುಗೂರಿಗೆ ಸಂಪರ್ಕಿಸುವ ಮಾರ್ಗದ ಕಾಕಾನಗರ ಬಳಿಯ ಸೇತುವೆ ಶಿಥಿಲಗೊಂಡಿದ್ದು, ಪ್ರಯಾಣಿಕರು ಆತಂಕದಲ್ಲಿ ಸಂಚರಿಸುವಂತಾಗಿದೆ.
ಸೇತುವೆ ಮೇಲೆ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ಸೇತುವೆ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಕಾಣುತ್ತಿವೆ. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಲವಾರು ಸಲ ಜನರು ಗಮನಕ್ಕೆ ತಂದಿದ್ದಾರೆ. ಸಮಸ್ಯೆಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ ಎಂದು ಮೌನೇಶ, ನಾಗರಾಜ, ಸಿದ್ದು ಮುದುಗಲ್ ದೂರಿದರು.
2009 ರ ಪ್ರವಾಹದಲ್ಲಿ ಸೇತುವೆಯ ತಡೆಗೋಡೆಗಳು ಕಿತ್ತುಹೋಗಿದ್ದವು. ಅಂದಿನ ಲೋಕೋಪಯೋಗಿ ಸಚಿವರು ಸೇತುವೆಯನ್ನು ಪರಿಶೀಲಿಸಿ, ಮತ್ತೆ ಪುನರ್ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ, ಇಂದಿಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಿಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ಕೂಡಲೇ ಈ ಬಗ್ಗೆ ಗಮನಹರಿಸಿ, ಸೇತುವೆ ಕುಸಿತದಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಸೇತುವೆಯನ್ನು ಪುನರ್ ನಿರ್ಮಾಣ ಮಾಡುವುದಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥ ಗುಂಡಪ್ಪಗೌಡ ಆಗ್ರಹಿಸಿದ್ದಾರೆ.
’ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಶಾಲಾ ಮಕ್ಕಳು ಕಾರ್ಮಿಕರು ಸಾರ್ವಜನಿಕರು ನಡೆದಾಡುತ್ತಾರೆ. ತೀರ ಹಳೆಯ ಸೇತುವೆ ಬಿಳುವ ಹಂತ ತಲುಪಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗಲಿ’ ಎನ್ನುತ್ತಾರೆ ಭಗವಂತ ಕುಮಾರ ಯಮನಾಳ.