ರಾಯಚೂರು: ಜನರು ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡಬೇಕು. ಇದರಿಂದ ಒಳ್ಳೆಯ ಆರೋಗ್ಯವನ್ನು ಹೊಂದುವುದರ ಜೊತೆಗೆ ಅನೇಕ ರೋಗಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ತಾಲ್ಲೂಕು ತಹಶೀಲ್ದಾರ್ ಡಾ.ಹಂಪಣ್ಣ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ 5ನೇ ಅಂತಾರಾಷ್ಟ್ರಿಯ ಯೋಗ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಯೋಗ ಮತ್ತು ಆರ್ಯುವೇದ, ವೈದ್ಯಕೀಯ ವಿಜ್ಞಾನಗಳ ಕುರಿತು ಭಾರತೀಯ ಪರಂಪರೆಯು ಜಗತ್ತಿಗೆ ನೀಡಿದ ಅದ್ಭುತ ಕೊಡುಗೆಗಳಾಗಿವೆ. ವಿಶ್ವದ ಸುಮಾರು 185ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಜಾಥಾವು ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಿಂದ ಆರಂಭವಾಗಿ, ಗಾಂಧಿಚೌಕ್, ಮಹಾವೀರ್ಚೌಕ್, ತೀನ್ ಕಂದಿಲ್ ವೃತ್ತದ ಮೂಲಕ ಜಿಲ್ಲಾ ಆಯುಷ್ ಕಚೇರಿ ತಲುಪಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್, ಡಾ.ಚಂದ್ರಶೇಖರ್ ಸುವರ್ಣಗಿರಿ ಮಠ, ಡಾ.ಶಾಕೀರ್, ಡಾ.ಹುಲ್ಲೂರು, ಭಾರತೀಯ ಸೇವಾದಳ ರೆಡ್ಕ್ರಾಸ್ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.