ಮಸ್ಕಿ: ತಾಲ್ಲೂಕಿನ ಬುದ್ದಿನ್ನಿ (ಎಸ್) ಹಾಗೂ ಗೌಡನಭಾವಿ ಗ್ರಾಮಕ್ಕೆ ಕೇಂದ್ರ ಸರ್ಕಾರ ರಾಷ್ಟ್ರೀಯ ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಪ್ರೌಢಶಾಲೆ ಮಂಜೂರು ಮಾಡಿದೆ.
ರಾಜ್ಯಕ್ಕೆ 8 ಪ್ರೌಢಶಾಲೆಗಳು ಮುಂಜೂರಾಗಿದ್ದು ಅದರಲ್ಲಿ ರಾಯಚೂರು ಜಿಲ್ಲೆಗೆ ಎರಡು ಶಾಲೆಗಳು ಮುಂಜೂರು ಮಾಡಿದೆ. ಜಿಲ್ಲೆಗೆ ಬಂದ ಆ ಎರಡು ಶಾಲೆಗಳು ಮಸ್ಕಿ ತಾಲ್ಲೂಕಿಗೆ ಬಂದಿರುವುದು ವಿಶೇಷವಾಗಿದೆ.
ಈಗಾಗಲೇ ಶಾಲೆಯ ಡಯಾಸ್ ಕೋಡ್ ಬಂದಿದ್ದು ಶೀಘ್ರ ಶಾಲೆಗಳು ಆರಂಭವಾಗಲಿವೆ ಎಂದು ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ ತಿಳಿಸಿದ್ದಾರೆ.
ಹೋರಾಟಕ್ಕೆ ಸಂದ ಜಯ: ಬುದ್ದಿನ್ನಿ (ಎಸ್) ಗ್ರಾಮಕ್ಕೆ ಸರ್ಕಾರ ಪ್ರೌಢಶಾಲೆ ಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ ಎಂದು ಬುದ್ದಿನ್ನಿ ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಮುಖಂಡ ನಾಗರೆಡ್ಡಿ ದೇವರಮನಿ ಸಂತಸ ಸಿಕ್ಕಿದೆ ಎಂದರು.
ಹಿನ್ನೆಲೆ:ಬುದ್ದಿನ್ನಿ ಗ್ರಾಮದಲ್ಲಿ ಪ್ರೌಢಶಾಲೆ ಮುಂಜೂರು ಆಗದಿದ್ದರೆ ಸರ್ಕಾರ ಬೃಹತ್ ಸುಸಜ್ಜಿತ ಕಟ್ಟಡ ನಿರ್ಮಿಸಿತ್ತು. ಶಾಲೆಗಾಗಿ ಹಲವಾರು ಬಾರಿ ವಿದ್ಯಾರ್ಥಿಗಳು ರಸ್ತೆ ತಡೆ, ಕಚೇರಿ ಮುತ್ತಿಗೆ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.