ಗ್ರಾಮದ ಹನುಮಂತ ವಾಲೀಕಾರರ ಮನೆಯ ಹತ್ತಿರ ತಿಪ್ಪೆಯಲ್ಲಿ ಹೂತು ಹೋಗಿರುವ ಜೈನಶಾಸನವು 50 ಸಾಲುಗಳಿಂದ ರಚಿತವಾಗಿದೆ. ಇದು ಕನ್ನಡ ಭಾಷೆ, ಕನ್ನಡ ಲಿಪಿಯಲ್ಲಿದ್ದು, ಕಪ್ಪು ಶಿಲೆಯಲ್ಲಿದೆ. ಈ ಶಾಸನವು ಕಲ್ಯಾಣ ಚಾಳುಕ್ಯ ಅರಸ ಭೂಲೋಕಮಲ್ಲನ (3ನೇ ಸೋಮೇಶ್ವರ)ದಾಗಿದೆ. ಇದು ಕ್ರಿ.ಶ. 1130 ರ ಕಾಲಕ್ಕೆ ಸೇರುತ್ತಿದ್ದು, ಈತನ ಸಾಮಂತನಾಗಿ ಮಾರಯ್ಯ ನಾಯಕನಿದ್ದನು. ಈತನು ದೇವರ ಸೇವೆಗಾಗಿ 450 ಕಮ್ಮ ಭೂಮಿ, ಎರಡು ಮನೆಯ ನಿವೇಶನ, ಹೂವಿನತೋಟ, ದೇವರ ಅಂಗ ಭೋಗ, ರಂಗಭೋಗ, ಖಂಡಸ್ಪುಟಿತ ಜೀರ್ಣೋದ್ಧಾರ ಮೊದಲಾದವುಗಳಿಗೆ ದತ್ತಿ ನೀಡಿದನು ಎನ್ನುವ ಉಲ್ಲೇಖವಿದೆ.