ಬೆಂಗಳೂರು: ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಟ್ರಕ್ ಟರ್ಮಿನಲ್ ಮತ್ತು ಆಸ್ಪತ್ರೆಗಳ ಸಮೀಪದಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಗುರುವಾರ ಕಾಂಗ್ರೆಸ್ನ ಜಯಮಾಲ ಅವರ ಪ್ರಶ್ನೆಗೆ ಉತ್ತರಿಸಿ, ಸ್ಥಿರ ಅಥವಾ ಸಂಚಾರಿ ಕ್ಯಾಂಟೀನ್ಗಳನ್ನು ಆರಂಭಿಸುವ ಉದ್ದೇಶವಿದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್ಗಳಲ್ಲಿ 175 ವಾರ್ಡ್ಗಳ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿದೆ. ಇದರಲ್ಲಿ 166 ವಾರ್ಡ್ಗಳಲ್ಲಿ ಆಹಾರ ವಿತರಿಸಲಾಗುತ್ತಿದೆ. 8 ವಾರ್ಡ್ಗಳಲ್ಲಿ ಚಾಲನೆಗೊಳ್ಳಬೇಕಾಗಿದೆ. ಕೆಎಸ್ಆರ್ಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಚಾರಿ ಕ್ಯಾಂಟೀನ್ ಸ್ಥಾಪಿಸಲಾಗುವುದು ಎಂದರು.
ಉಳಿದ 24 ವಾರ್ಡ್ಗಳಲ್ಲಿ ಸ್ಥಳ ಲಭ್ಯವಿಲ್ಲ. ಅಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸುತ್ತೇವೆ. ಇದಕ್ಕಾಗಿ ಟೆಂಪೊ ಟ್ರಾವೆಲರ್ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
ಬೆಂಗಳೂರು ನಗರ ಹೊರತುಪಡಿಸಿ ಜಿಲ್ಲೆ, ತಾಲ್ಲೂಕು ಮತ್ತು ಸ್ಥಳೀಯ ಸಂಸ್ಥೆಗಳ ಕೇಂದ್ರ ಸ್ಥಳಗಳಲ್ಲಿ 247 ಇಂದಿರಾ ಕ್ಯಾಂಟೀನ್ ಆರಂಭಿಸಲು ಅನುಮೋದನೆ ನೀಡಲಾಗಿದೆ ಎಂದು ಜಾರ್ಜ್ ತಿಳಿಸಿದರು.
ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಜಯಮಾಲ, ದೊಡ್ಡ ಸಮಾವೇಶಗಳು, ಚಳವಳಿ, ಧರಣಿ ನಡೆಯುವ ಸ್ಥಳಗಳಲ್ಲಿ ಕ್ಯಾಂಟೀನ್ಗಳನ್ನು ಆರಂಭಿಸಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದರು.